ಜನೇವರಿ 10, 2022 ರಂದು ಪ್ರೋ.ಚಂದ್ರಶೇಖರ ಪಾಟೀಲ ( ಚಂಪಾ) ನಿಧನರಾದರು.
ಎಳಿಮೆಯಲ್ಲಿಯೇ ಖಡಕ್ ಮಾತುಗಳಿಂದ ಬೆಳೆಯುತ್ತ ವಿದೇಶದಲ್ಲೂ ಶಿಕ್ಷಣ ಪಡೆದು ತವರು ನಾಡಿಗೆ ಬಂದು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಪ್ರೊಫೆಸರ್ ಆದವರು.
ಸಾಹಿತ್ಯದ ಒಳಹೊರಗನ್ನು ಜತನದಿಂದ ಅಭ್ಯಸಿಸಿ ವಿದ್ವತ್ ಮಣಿ ಆದವರು. ಬರಹ, ಹರಟೆ, ಕಥೆ, ಕವಿತೆ, ಚುಟುಕು ಬರೆದು ನಾಡಿನ ಉದ್ದಗಲಕ್ಕೂ ಸಂಚರಿಸಿ ಪ್ರತಿಭೆಯನ್ನು ಬೆಳಗಿದವರು. ಮೂಲೆ ಮೂಲೆಯ ಕರೆಗೆ ಓಗೊಟ್ಟು ತಲುಪಿ ಭಾಷೆ , ಸಾಹಿತ್ಯ, ವರ್ತಮಾನದ ಸುದ್ದಿಗೆ ಬದ್ದರಾದವರು. ನಿಲುವನ್ನು ಪ್ರತಿಪಾದಿಸಿದವರು. ಹಠವಾದಿ ಗಟ್ಟಿಗರು ಹೌದು.
1982 ರಲ್ಲಿ ಕನ್ನಡ ಭಾಷೆಯ ಅಗ್ರ ಸ್ಥಾನಕ್ಕಾಗಿ ಚಳುವಳಿ ನಡೆದಾಗ ; ಗೋಕಾಕ ಚಳುವಳಿಯಲ್ಲಿ ನಿರಂತರ ಧ್ವನಿಯಾದವರು. ಅವರ ಮಾತಿನ ಗತ್ತೇ ಹಾಗೆ. ಜನಜಾಗೃತಿ ಮೂಡಿಸುವಲ್ಲಿ ಮುಂಚೂಣಿಯಲ್ಲಿದ್ದರು. ಯಾವುದೇ ಆತ್ಮರತಿಯಿರದೆ ಬರೆದರು, ಬರೆಸಿದರು , ಪ್ರತಿಭೆಗಳನ್ನು ಬೆಳಗಿಸಿದವರು. ಬೇಕಾದವರ, ಬೇಡವಾದವರ ಮನದಲ್ಲೂ ಮೂಡಿದವರು. ಪ್ರಾಮಾಣಿಕ ನಡತೆಯಿಂದ ಹೆಸರಾದರು.
ರಾಜ್ಯದ ಅನೇಕ ಪತ್ರಿಕೆಗಳಿಗೆ ಬರೆದರು. ಪಿ.ಲಂಕೇಶರ 'ಲಂಕೇಶ್ ಪತ್ರಿಕೆ' ಗೆ ಉಪಸಂಪಾದಕರಾಗಿ ನಂತರ ಧಾರವಾಡದ ಪಟ್ಟಣಶೆಟ್ಟಿ, ಗಿರಡ್ಡಿ ಗೆಳೆಯರೊಂದಿಗೆ ''ಸಂಕ್ರಮಣ' ದ್ವೈಮಾಸಿಕ ಪತ್ರಿಕೆ ಆರಂಭಿಸಿ ನಾಡಿಗೆ ತಲುಪಿಸಿದರು. ನಂತರ ಅದರ ಸಂಪಾದಕತ್ವ ವಹಿಸಿ ಐದು ದಶಕ ಪತ್ರಿಕೆ ನಡೆಸಿದರು.
ಒಪ್ಪಿದ್ದನ್ನು ತಿಳಿಸುತ್ತ ಒಪ್ಪದೇ ಇರುವುದನ್ನು ನಿರಾಕರಿಸಿದ ದಿಟ್ಟತನದವರು. ನಾಡಿನ ಸಮ್ಮೇಳನ, ಉತ್ಸವ, ವಿಚಾರ ಸಂಕೀರಣ , ಹಲವಾರು ಕನ್ನಡದ ಕಾರ್ಯಕ್ರಮಗಳಿಗೆ ಭಾಗವಹಿಸಿ ಬಲ ತುಂಬಿದರು.
ಗಡಿನಾಡು ಕಾವಲು ಸಮಿತಿ, ಪುಸ್ತಕ ಪ್ರಾಧಿಕಾರ, ಬಂಡಾಯ ಸಾಹಿತ್ಯ, ಕನ್ನಡ ಸಾಹಿತ್ಯ ಪರಿಷತ್ತು ಎಲ್ಲದರ ನೇತ್ರತ್ವ ವಹಿಸಿ ಸಂಘಟಿತ ಕಾರ್ಯಗಳನ್ನು ಮಾಡುತ್ತ ಅಲಕ್ಷಿತ ಪ್ರತಿಭೆಗಳನ್ನು ಗುರುತಿಸಿ ಗೌರವಿಸಿದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಸಮ್ಮೇಳನಗಳ ಅಧ್ಯಕ್ಷತೆಗೆ ದಲಿತರು, ಅಲ್ಪಸಂಖ್ಯಾತರಿಗೆ ಅವಕಾಶ ನೀಡಿ ಗೌರವಿಸಿದವರು. ಸರಕಾರಗಳು ತಪ್ಪು ಮಾಡಿದಾಗ ಸಮ್ಮೇಳನಗಳಲ್ಲಿಯೇ ಸರಕಾರದ ಎದುರೇ ಛೇಡಿಸಿದವರು ಚಂಪಾ. ಆಡದೇ ಗಟ್ಟಿಯಾಗಿ ನಿಂತು ಮಾಡಿ ತೋರಿದವರು. ಇಂಥ ಗಟ್ಟಿಗ ಹೋರಾಟಗಾರ ಬರಹಗಾರ ನಾಡನ್ನು ಅಗಲಿರುವುದು ಕನ್ನಡ ನಾಡಿನ ಜನರಿಗೆ ದುಃಖ ತಂದಿದೆ.
'ಸಂಕ್ರಮಣ' ದ ಎಲ್ಲ ಸಂಚಿಕೆಗಳನ್ನು ಸರಕಾರಿ ಅನುದಾನದಲ್ಲಿ ಸಂಪುಟಗಳಾಗಿಸಿದ್ದು ಅಭಿನಂದನೀಯ. ನಿವೃತ್ತಿಯ ನಂತರ ನಾಡಿನ ಸಂಘಟನೆಗಳಿಗೆ ಚಲನಶೀಲತೆ, ಜೀವ ತುಂಬಿದರು.
2017ರಲ್ಲಿ ಮೈಸೂರಿನಲ್ಲಿ ಜರುಗಿದ 83 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮೇಳನದ ಅಧ್ಯಕ್ಷರಾಗಿದ್ದರು. 83ರ ವಯಸ್ಸಿನಲ್ಲಿ ಈಗ ನಮ್ಮನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಭಾವಪೂರ್ಣ ನಮನಗಳು.
-ಅಕ್ಬರ್ ಕಾಲಿಮಿರ್ಚಿ
ಭಾಗ್ಯನಗರ, ಕೊಪ್ಪಳ
ಮೊ: 9731327829