ಕೊಪ್ಪಳ : ಕುಕನೂರು ತಾಲೂಕಿನ ರ್ಯಾವಣಕಿ ಗ್ರಾಮದ ಸಮೀಪ ಹೊಲದಲ್ಲಿದ್ದ ವೃದ್ಧ ರೈತನ ಮೇಲೆ ಶುಕ್ರವಾರ ಕರಡಿ ದಾಳಿ ಮಾಡಿದೆ.
ರ್ಯಾವಣಕಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಮೀಪದ ಹೊಲಕ್ಕೆ ಹೋಗಿದ್ದ 60 ವರ್ಷದ ರೈತ ನಾಗಪ್ಪ ಬೆಂಚಳ್ಳಿ ಮೇಲೆ ಕರಡಿ ದಾಳಿ ಮಾಡಿ ಗಾಯಗೊಳಿಸಿದ್ದು ರೈತನ ಮೈಯೆಲ್ಲ ರಕ್ತಮಯವಾಗಿತ್ತು.
ಒಂದು ದೊಡ್ಡ ಕರಡಿ ಹಾಗೂ ಎರಡು ಕರಡಿ ಮರಿಗಳು ದಾಳಿ ಮಾಡಿವೆ. ರೈತ ಇರುವ ಹೊಲದತ್ತ ಕರಡಿ ಓಡುತ್ತಿರುವುದು ನೋಡಿದ ಯುವಕರು ಅದು ರೈತನ ಮೇಲೆ ದಾಳಿ ಮಾಡಬಹುದು ಎಂಬ ಅನುಮಾನದಿಂದ ಯುವಕರ ತಂಡ ರೈತನತ್ತ ಓಡಿ ಹೋಗಿದ್ದಾರೆ.
ಅಷ್ಟರಲ್ಲಿಯೆ ರೈತ ಮೇಲೆ ತೀವ್ರ ದಾಳಿ ನಡೆಸಿ ಗಾಯಗೊಳಿಸಿ ಕರಡಿ ಓಡಿ ಹೋಗಿದೆ. ಗಾಯಗೊಂಡಿರುವ ರೈತ ನಾಗಪ್ಪರನ್ನು ಸಮೀಪದ ಮಂಗಳೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಕರಡಿ ಹಿಡಿದು ಜನರನ್ನು ರೈತರನ್ನು ಭಯಮುಕ್ತರನ್ನಾಗಿ ಮಾಡುವಂತೆ ಅರಣ್ಯ ಇಲಾಖೆಗೆ ಜನತೆ ಆಗ್ರಹಿಸಿದ್ದಾರೆ.
ಮಂಗಳೂರು ರ್ಯಾವಣಕಿ ಭಾಗದಲ್ಲಿ ಮೊದಲ ಬಾರಿ ಕರಡಿ ಕಾಣಿಸಿಕೊಂಡಿದ್ದು ರೈತ ಮೇಲೆ ದಾಳಿಯೂ ಮಾಡಿದ್ದು ರೈತ ಬಂದಿದ್ದಾದರೂ ಎಲ್ಲಿಂದ ಎಂಬ ಪ್ರಶ್ನೆ ಉದ್ಭವಿಸಿದೆ. ಕೊಪ್ಪಳ ತಾಲೂಕಿನ ಇರಕಲ್ಲಗಡ ಆಸುಪಾಸು ಕರಡಿಗಳ ಹಾವಳಿ ಕಂಡು ಬರುತ್ತದೆ. ಅಲ್ಲಿ ಗುಡ್ಡ ಪ್ರದೇಶ ಇರುವುದರಿಂದ ಅಲ್ಲಿ ಕರಡಿಗಳು ಇರುವುದು ಸಹಜ.
ಆದರೆ ಬಯಲು ಸೀಮೆಯಂಥ ರ್ಯಾವಣಕಿಯಲ್ಲಿ ಕರಡಿ ದಾಳಿ ನಡೆಸಿರುವುದು ಕರಡಿ ಬಂದಿದ್ದಾದರೂ ಎಲ್ಲಿಂದ ಎಂಬ ಪ್ರಶ್ನೆ ಉದ್ಭವಿಸಿದೆ.