ಕೊಪ್ಪಳ: ಪ್ರೇಮಿಗಳಿಬ್ಬರು ಕೂಡಿ ಬದುಕಲು ಊರು ತೊರೆದು ಹೋದವರು ಮತ್ತೆ ಮರಳಿ ಊರಿಗೆ ಬರುತ್ತಿದ್ದಾಗ, ಕಾಲುವೆಗೆ ಹಾರಿದ ಹೃದಯ ವಿದ್ರಾವಕ ಘಟನೆ ಬುಧವಾರ (ನಿನ್ನೆ) ಮಧ್ಯಾಹ್ನ 4 ಗಂಟೆಗೆ ನಡೆದಿದೆ.
ಘಟನೆ ವಿವರ: ಹೊಸ ನಿಂಗಾಪುರದ ಪ್ರವೀಣ (18) ಮತ್ತು ಸಾಣಾಪುರದ ಅಂಜಲಿ (18) ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಪ್ರವೀಣ ತಂದೆ ತಾಯಿ ಈ ಮೊದಲು ಸಾಣಾಪುರದಲ್ಲಿ ವಾಸವಿದ್ದರು. ಆಗ ಪ್ರವೀಣ - ಅಂಜಲಿ ನಡುವೆ ಪ್ರೇಮಾಂಕುರ ಆಗಿದೆ. ಕೆಲ ವರ್ಷಗಳಿಂದ ಪ್ರವೀಣ ಪಾಲಕರು ಹೊಸ ನಿಂಗಾಪುರಕ್ಕೆ ಶಿಫ್ಟ್ ಆದ ಬಳಿಕ ಪ್ರವೀಣ ಮುನಿರಾಬಾದ್ನ ಶ್ಯಾಮಿಯಾನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ.
ಎರಡು ದಿನಗಳ ಹಿಂದೆ ಪ್ರವೀಣ ಅಂಜಲಿಯನ್ನು ತನ್ನ ಮನೆಗೆ ಕರೆತಂದಿದ್ದಾಗ, ಪ್ರವೀಣ ತಾಯಿ ಇದು ಸರಿಯಲ್ಲ ಅಂಜಲಿಯನ್ನು ಅವರ ಮನೆಗೆ ಕಳಿಸಿ ಬಾ ಎಂದು ಹೇಳಿದಕ್ಕೆ ಇಬ್ಬರೂ ಊರು ತೊರೆದು ಹಗರಿಬೊಮ್ಮನಹಳ್ಳಿಗೆ ಹೋಗಿದ್ದರು.
ಈ ವಿಷಯ ಮನೆಮಂದಿಗೆ ತಿಳಿಯುತ್ತಿದ್ದಂತೆ, ಪ್ರವೀಣ ತಾಯಿ ಅವರನ್ನು ಮರಳಿ ಕರೆತರುವಂತೆ ಬಾಡಿಗೆ ಕಾರು ಕಳಿಸಿದ್ದರು. ಚಾಲಕ, ಪ್ರವೀಣ ಮತ್ತು ಅಂಜಲಿ ಮೂವರು ಕಾರಿನಲ್ಲಿ ವಾಪಸ್ ಬರುತ್ತಿದ್ದ ಸಂದರ್ಭ, ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಎಡದಂಡೆ ಕಾಲುವೆ ಹತ್ತಿರ ಇಬ್ಬರೂ ಮೂತ್ರವಿಸರ್ಜನೆ ನೆಪದಲ್ಲಿ ಕಾರಿನಿಂದ ಇಳಿದರು.
ತಕ್ಷಣ ಕಾಲುವೆಯ ಎಡಭಾಗದಲ್ಲಿ ತುಸು ದೂರ ಹೋಗಿ ಪ್ರೇಮಿಗಳು ಕಾಲುವೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನೀರಿನ ರಭಸಕ್ಕೆ ಸುಮಾರು 200 ಮೀಟರ್ ದೂರವರೆಗೆ ಕೊಚ್ಚಿಕೊಂಡು ಹೋಗಿದ್ದು, ನಂತರ ಇಬ್ಬರೂ ಮುಳುಗಿ ಕಾಣೆಯಾಗಿದ್ದಾರೆ. ಈ ದೃಶ್ಯ ಅಲ್ಲಿನ ಕೆಲ ನಿವಾಸಿಗಳು ಕಣ್ಣಾರೆ ಕಂಡಿದ್ದಾರೆ.
ಶೋಧ ಕಾರ್ಯ: ಸ್ಥಳೀಯ ನಿವಾಸಿಗಳು ಮತ್ತು ವಾಹನ ಸವಾರರು ಈ ದೃಶ್ಯ ನೋಡಿ ಗಾಬರಿಯಾಗಿದ್ದು, ಅವರನ್ನು ಉಳಿಸಲು ಸಾಧ್ಯವಾಗಿಲ್ಲ. ಮಾಹಿತಿ ಲಭ್ಯವಾಗುತ್ತಿದ್ದಂತೆ ಮುನಿರಾಬಾದ್ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ಕೈಗೊಂಡಿದ್ದಾರೆ. ಶೋಧ ಕಾರ್ಯವನ್ನು ಶಿವಪುರವರೆಗೆ ವಿಸ್ತರಿಸಲಾಗಿದೆ.
ಇದುವರೆಗೆ ಪ್ರವೀಣ ಮತ್ತು ಅಂಜಲಿ ಪತ್ತೆಯಾಗಿಲ್ಲ.
ಘಟನೆ ಬಗ್ಗೆ ಮುನಿರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತ್ತೆ ಕಾರ್ಯ ಮುಂದುವರೆದಿದೆ.
" ಇಬ್ಬರೂ ಕೈ ಹಿಡಿದುಕೊಂಡು ಬಂದು ಕಾಲುವೆಗೆ ಹಾರಿದ್ರು ಜನ ನೋಡ್ತಾ ಇದ್ವಿ ಕಾಪಾಡಿ ಅಂತ ಕೂಗಿದ್ವಿ. ಯಾರೂ ಕಾಪಾಡೋಕೆ ಆಗಲಿಲ್ಲ. ನಮ್ಮ ಕಡೆ ಅವರು ಬಿದ್ದಿದ್ರೆ ಕಾಪಾಡತಿದ್ವಿ ಹಿಂಗೆ ಕಾಲುವೆಗೆ ಬಿದ್ದ ಮೂವರನ್ನ ನಾವು ಕಾಪಾಡಿವಿ. ಆದ್ರೆ ಅವರಿಬ್ಬರನ್ನ ಕಾಪಾಡೋಕೆ ಆಗಲಿಲ್ಲ " - ರೇಣುಕಮ್ಮ ಘಟನೆಯ ಪ್ರತ್ಯಕ್ಷದರ್ಶಿ