ಕೊಪ್ಪಳ : ರಾಯಚೂರಿಗೆ ಏಮ್ಸ್ ಬೇಕು ಎಂಬ ಹೋರಾಟ ಇಂದಿಗೆ 759 ದಿನಕ್ಕೆ ಕಾಲಿಟ್ಟಿದ್ದು ನಮ್ಮ ಬೇಡಿಕೆಗೆ ಕೇಂದ್ರ ಸರಕಾರ ನಿರ್ಲಕ್ಷ್ತ ವಹಿಸಿದೆ ಎಂದು ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಡಾ. ಬಸವರಾಜ ಕಳಸ ಹೇಳಿದರು.
ರವಿವಾರ ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಮಾತನಾಡಿದ ಅವರು 1956 ರಲ್ಲಿ ಜವಾಹರಲಾಲ್ ನೆಹರು ಮೊದಲು ಏಮ್ಸ್ ಆರಂಭಿಸಿದ್ರು . ಇಂದು ದೇಶದಲ್ಲಿ 24 ಏಮ್ಸ್ ಇವೆ. ನಂಜುಂಡಪ್ಪ ವರದಿಯಂತೆ ರಾಯಚೂರು ಜಿಲ್ಲೆ ಶಿಕ್ಷಣ ಉದ್ಯೋಗದಲ್ಲಿ ಹಿಂದುಳಿದಿದೆ. ಹಾಗಾಗಿ ರಾಯಚೂರಿಗೆ ಏಮ್ಸ್ ಬೇಕು. ರಾಯಚೂರಿಗೆ ಏಮ್ಸ್ ದೊರೆತರೆ ಕಲ್ಯಾಣ ಕರ್ನಾಟಕಕ್ಕೆ ದೊರೆತಂತೆ.
250 ಎಕರೆ ಪ್ರದೇಶದ ಏಮ್ಸ್ ನಲ್ಲಿ 19 ಸೂಪರ್ ಸ್ಪೇಶಾಲಿಟಿ ಆಸ್ಪತ್ರೆ ಇರುತ್ತವೆ. ಇದರಿಂದ ನಮ್ಮ ಭಾಗಕ್ಕೆ ಉತ್ತಮ ವೈದ್ಯಕೀಯ ಶಿಕ್ಷಣ , 50 ಸಾವಿರದಷ್ಟು ವೈದ್ಯಕೀಯ ಉದ್ಯೋಗ, ವೈದ್ಯಕೀಯ ಚಿಕಿತ್ಸೆ ದೊರೆಯುತ್ತದೆ.
ಆದರೆ ಧಾರವಾಡ ಭಾಗದ ರಾಜಕಾರಣಿಗಳ ಹುನ್ನಾರದಿಂದ ನಮಗೆ ಏಮ್ಸ್ ದೊರೆಯುವಲ್ಲಿ ತಡವಾಗುತ್ತಿದೆ. ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ರಾಜ್ಯ ಸರಕಾರ ಒಪ್ಪಿದರೂ ಕೇಂದ್ರ ಸರಕಾರ ನಿರ್ಲಕ್ಷ್ಯ ತೋರುತ್ತಿದೆ. ಕಲ್ಯಾಣ ಕರ್ನಾಟಕದ ರಾಜಕಾರಣಿಗಳು ಈ ಬಗ್ಗೆ ಮಾತನಾಡಲಿಲ್ಲ. ನಮ್ಮ ಭಾಗದ ರಾಜಕಾರಣಿಗಳಲ್ಲಿ ಒಗ್ಗಟ್ಟಿಲ್ಲ. ನಮ್ಮ ಹೋರಾಟ ತೀವ್ರಗೊಳ್ಳಲು ಕೊಪ್ಪಳ ಜಿಲ್ಲೆಯ ಸಂಘ ಸಂಸ್ಥೆಗಳು, ಸಂಘಟನೆಗಳು ಬೆಂಬಲಿಸಿ ಕೈ ಜೋಡಿಸುವಂತೆ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಸಹ ಸಂಚಾಲಕ ಅಶೋಕ ಕುಮಾರ್ ಜೈನ್, ಹೋರಾಟಗಾರರಾದ ರಮೇಶ ತುಪ್ಪದ, ಜಗದೀಶ ಪೂರತಿಪ್ಲಿ, ಮಲ್ಲಿಕಾರ್ಜುನ ಇತರರು ಉಪಸ್ಥಿತರಿದ್ದರು.