ಈ ಬಾರಿಯ ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್ ನಡುವೆ ನೇರಾ ನೇರ ಸ್ಪರ್ಧೆ ಇತ್ತು. ಕಣದಲ್ಲಿ ಒಟ್ಟು 19 ಅಭ್ಯರ್ಥಿಗಳಿದ್ದರೂ ಸ್ಪರ್ಧೆ ಕಾಂಗ್ರೆಸ್ ಬಿಜೆಪಿ ನಡುವೆ ಇತ್ತು.
ಆದರೆ 19 ಜನರಲ್ಲಿ ಕಾಂಗ್ರೆಸ್ ಬಿಜೆಪಿ ಹೊರತು ಪಡಿಸಿದರೆ ಮೂವರು ಅಭ್ಯರ್ಥಿಗಳು ಭರ್ಜರಿ ಪ್ರಚಾರ ನಡೆಸಿ ಗಮನ ಸೆಳೆದರು. ಅವರೆ ಪಕ್ಷೇತರ ಅಭ್ಯರ್ಥಿ ಕರೀಂ ಪಾಷಾ ಗಚ್ಚಿನಮನಿ, ಕೆಆರ್ ಎಸ್ ಪಕ್ಷದ ನಿರುಪಾದಿ, SUCI ಕಮ್ಯೂನಿಸ್ಟ್ ಪಕ್ಷದ ಶರಣು ಗಡ್ಡಿ. ಮೂವರೂ ಯುವಕರು. ಈ ಮೂವರ ಪ್ರಚಾರ ನೋಡಿದಾಗ ಗೆಲ್ಲದಿದ್ದರೂ ಗಮನಾರ್ಹ ಸಂಖ್ಯೆಯ ಮತ ಪಡೆಯುವ ಅಂದಾಜಿತ್ತು.
ಪಕ್ಷೇತರ ಅಭ್ಯರ್ಥಿ ಹಡಗು ಗುರುತಿನ ಕರೀಂ ಪಾಷಾ ಗಚ್ಚಿನಮನಿ ಪ್ರಚಾರಕ್ಕಾಗಿ ಧ್ವಜ , ಶಾಲುಗಳನ್ನು ಮಾಡಿಸಿದ್ದರು. ಭರ್ಜರಿ ರೋಡ್ ಷೋ ಮಾಡಿದರು. ಮಹಿಳೆಯರ ಮೂಲಕ ಮನೆ ಮನೆ ಪ್ರಚಾರ ಮಾಡಿಸಿದರು. ಕೊಪ್ಪಳ ಅಲ್ಲದೆ ಬೇರೆ ನಗರಗಳಲ್ಲಿ ಬೈಕ್ ರ್ಯಾಲಿ ಮಾಡಿದರು. ಆದರೆ ಇವರಿಗೆ ಬಂದ ಮತಗಳು1238.
ಕೆಆರ್ ಎಸ್ ಪಕ್ಷದ ಟಾರ್ಚ್ ಗುರುತಿನ ಅಭ್ಯರ್ಥಿ ಸಿಂಧನೂರಿನ ನಿರುಪಾದಿ ಮತ್ತವರ ತಂಡ ಲೋಕಸಭಾ ಕ್ಷೇತ್ರದ ತುಂಬ ಭರ್ಜರಿ ಪ್ರಚಾರ ನಡೆಸಿತು. ಪ್ರಚಾರದಲ್ಲಿ ಹಳದಿ ಟಿ ಶರ್ಟ್ ಗಳ ಸಮವಸ್ತ್ರ ಗಮನ ಸೆಳೆದಿತ್ತು. ಭ್ರಷ್ಟಾಚಾರ ವಿರೋಧಿ ನೆಲೆಯಲ್ಲಿ ಚುನಾವಣೆ ಎದುರಿಸಿದ ಇವರಿಗೆ 900 ಮತಗಳು ಬಂದಿವೆ.
ದುಡಿಯುವ ಜನ , ಯುವನಜರ, ವಿದ್ಯಾರ್ಥಿಗಳ ಪರ ಹೋರಾಟದಲ್ಲಿ ಇರುವ SUCI ಕಮ್ಯುನಿಸ್ಟ್ ಪಕ್ಷದ ಶರಣು ಗಡ್ಡಿಯವರ ಪ್ರಚಾರ ಕೂಡ ಜೋರಾಗಿತ್ತು. ನಗರ, ಗ್ರಾಮೀಣ, ಅಲ್ಲದೆ ನರೇಗಾ ಕಾಮಗಾರಿ ನಡೆಯುವ ಸ್ಥಳ , ಜನರ ವಾಯು ವಿಹಾರದ ಸ್ಥಳಗಳಿಗೂ ತೆರಳಿ ಮತ ಯಾಚಿಸಿದರು. ಇವರ ಪ್ರಚಾರ ವೈಖರಿಗೆ 10 ಸಾವಿರ ಮತಗಳ ಲೆಕ್ಕಾಚಾರವಿತ್ತು. ಆದರೆ ಇವರಿಗೆ ಬಂದ ಮತಗಳು 1106.
ಅಂದಹಾಗೆ ಬಳ್ಳಾರಿಯ ರುಕ್ಮಿಣಿ ಎಂಬುವವರು ಪಕ್ಷೇತರರಾಗಿ ಸ್ಪರ್ಧಿಸಿ ಕೊಪ್ಪಳದಲ್ಲಿ ಒಂದು ಪತ್ರಿಕಾಗೋಷ್ಠಿ ನಡೆಸಿದ್ದು ಬಿಟ್ಟರೆ ಮತ್ತೆ ಅವರ ಪ್ರಚಾರ ಗಮನಕ್ಕೆ ಬರಲಿಲ್ಲ. ಅವರಿಗೆ 5282 ಮತಗಳು ಬಂದಿವೆ.
ಮತದಾರ ಮನಸ್ಸಲ್ಲೇನಿದೆ, ಮತ ಚಲಾಯಿಸುವಾಗ ಅವರ ಆದ್ಯತೆ , ಅವರ ರಾಜಕೀಯ ನಾಡಿಮಿಡಿತ ಏನೆಂಬುದು ಸದಾ ರಹಸ್ಯಮಯ, ಮತ ಎಣಿಕೆಯಲ್ಲಿ ಮಾತ್ರ ಅದಕ್ಕೆ ಉತ್ತರ ಸಿಗುತ್ತದೆ .