ಕೊಪ್ಪಳ : ಗೃಹಲಕ್ಷ್ಮಿ ಹಣದ ಜಮಾ ಹಾಗೂ ವಿತರಣೆಯಲ್ಲಿ ಲೋಪ ಆಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿರುವಾಗಲೆ ಕೊಪ್ಪಳ ಜಿಲ್ಲೆಯಲ್ಲೂ ಮೃತ ಫಲಾನುಭವಿಗಳ ಖಾತೆಗಳಿಗೆ ಹಣ ಜಮೆಯಾಗಿರುವ ಪ್ರಕರಣ ಪತ್ತೆಯಾಗಿವೆ.
ಜಿಲ್ಲೆಯಲ್ಲಿ ಒಟ್ಟು 3.28 ಲಕ್ಷ ಗೃಹಲಕ್ಷ್ಮಿ ಫಲಾನುಭವಿಗಳಿದ್ದು, ಪ್ರತಿ ತಿಂಗಳು ಸುಮಾರು ₹63 ಕೋಟಿ ಹಣ ಜಮೆಯಾಗುತ್ತಿದೆ. ಜಿಲ್ಲಾಡಳಿತ ನಡೆಸಿದ ಪರಿಶೀಲನೆಯಲ್ಲಿ 7,083 ಫಲಾನುಭವಿಗಳು ಮೃತಪಟ್ಟಿದ್ದರೂ ಅವರ ಖಾತೆಗಳಿಗೆ ₹2.74 ಕೋಟಿ ಹಣ ಜಮೆಯಾಗಿರುವುದು ಬೆಳಕಿಗೆ ಬಂದಿದೆ. ಈ ಪೈಕಿ 2,664 ಮೃತ ಫಲಾನುಭವಿಗಳ ಖಾತೆಗಳಿಂದ ಹಣ ಡ್ರಾ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಅಂಚೆ ಕಚೇರಿಯಲ್ಲಿ ಇರುವ ಖಾತೆಗಳಲ್ಲಿ ಮೃತ ಫಲಾನುಭವಿಗಳಿಗೆ ಹಣ ಜಮೆ ಆಗಿರುವುದು ಹೆಚ್ಚಿನ ಸಂಖ್ಯೆಯಲ್ಲಿವೆ. ಅಲ್ಲದೆ, ಸುಮಾರು 2,600 ಫಲಾನುಭವಿಗಳು ಡಬಲ್ ಅಕೌಂಟ್ ಹೊಂದಿದ್ದಾರೆ ಎಂಬ ಬಗ್ಗೆ ಪರಿಶೀಲನೆ ಮುಂದುವರಿದಿದೆ.
ಗೃಹಲಕ್ಷ್ಮಿ ಯೋಜನೆಯ ಹಣದಲ್ಲಿ ಅಕ್ರಮ ನಡೆಯುತ್ತಿದೆ ಎಂದು ಬಿಜೆಪಿ ಎಂಎಲ್ಸಿ ಹೇಮಲತಾ ನಾಯಕ ಆರೋಪಿಸಿದ್ದಾರೆ.
ಈ ಆರೋಪ ನಿರಾಕರಿಸಿರುವ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ಸರ್ಕಾರದಿಂದ ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗುವುದರಿಂದ ಗೋಲ್ಮಾಲ್ ನಡೆಯಲು ಸಾಧ್ಯವಿಲ್ಲ ಫಲಾನುಭವಿ ಮೃತಪಟ್ಟ ನಂತರವೂ ಹಣ ಜಮೆ ಆಗಿದ್ದು ಕಂಡುಬಂದರೆ ಆ ಹಣ ವಾಪಸ್ ಪಡೆಯಲಾಗುವುದು ಎಂದಿದ್ದಾರೆ.
ಈ ನಡುವೆ, ಪರಿಶೀಲನೆ ವೇಳೆ ಮೃತರ ಖಾತೆಗಳಿಗೆ ಜಮೆಯಾಗಿದ್ದ ಸುಮಾರು ₹81 ಲಕ್ಷವನ್ನು ಸರ್ಕಾರಕ್ಕೆ ಮರಳಿಸಲಾಗಿದೆ ಉಳಿದ ಪ್ರಕರಣಗಳ ಪರಿಶೀಲನೆಯೂ ಮುಂದುವರಿದಿದೆ ಎಂದು ತಿಳಿದು ಬಂದಿದೆ.