ಕೊಪ್ಪಳ : ಪರವಾನಗಿ ಇಲ್ಲದೆ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ ಸ್ಥಳಕ್ಕೆ ನಿನ್ನೆ ದಾಳಿ ಮಾಡಿರುವ ಲೋಕಾಯುಕ್ತ ಅಧಿಕಾರಿಗಳು 8 ಜನರ ವಿರುದ್ದ ಕನಕಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಅಕ್ರಮ ಮರಳು ಗಣಿಗಾರಿಕೆ ಕನಕಗಿರಿ ತಾಲೂಕು ನವಲಿ ಹಾಗೂ ಸಂಕನಾಳ ಹತ್ತಿರ ನಡೆದಿತ್ತು. ಅಕ್ರಮ ಮರಳು ಗಣಿಗಾರಿಕೆ ತಡೆಯಲು ಅಧಿಕಾರಿಗಳು ವಿಫಲರಾಗಿರುವ ಹಿನ್ನಲೆಯಲ್ಲಿ ಕೊಪ್ಪಳ ಲೋಕಾಯುಕ್ತ ಡಿಎಸ್ಪಿ ಲೋಕೇಶ ಸ್ಥಳಕ್ಕೆ ದಾಳಿ ಮಾಡಿದ್ಧಾರೆ.
ನವಲಿ ಹತ್ತಿರ ಹುಸೇನಬಿ ಎಂಬುವವರ ಜಮೀನಿನಲ್ಲಿ ಅಕ್ತಮವಾಗಿ 10 ಮೀಟರ್ ಆಳದವರೆಗೆ ಅಗೆದು ಮಣ್ಣು ತೆಗೆದು ನೀರಿನಿಂದ ತೊಳೆದು ಮರಳು ತೆಗೆಯುವ ಕಾರ್ಯ ನಡೆದಿತ್ತು. ಅಲ್ಲಿಯೆ 6 ಲೋಡ್ ಮರಳು ಸಂಗ್ರಹ ಪತ್ತೆಯಾಗಿದೆ.
ಅದೇ ರೀತಿ ಸಂಕನಾಳ ಹತ್ತಿ ಶಂಕ್ರಪ್ಪ , ಭಾಗಪ್ಪ , ಹುಲಿಗೆಮ್ಮ , ವೀರೇಶಪ್ಪ, ಶ್ಯಾಮಪ್ಪ , ನಿಂಗಮ್ಮ ಎಂಬುವವರ ಜಮೀನಿನಲ್ಲಿ 15 ಅಡಿ ಆಳದಲ್ಲಿ ತೆಗೆದು ಮಣ್ಣು ತೆಗೆದು ನೀರಿನಿಂದ ತೊಳೆದು ಮರಳು ತೆಗೆಯುವ ಕಾರ್ಯ ನಡೆದಿತ್ತು. ದಾಳಿ ನಡೆಸಿದಾಗ ಅಲ್ಲಿ 15 ಲೋಡ್ ಮರಳು ಸಂಗ್ರಹ ಪತ್ತೆಯಾಗಿದೆ.
ಎರಡೂ ಕಡೆ ದಾಳಿ ಸಂದರ್ಭದಲ್ಲಿ ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದ ಜೆಸಿಬಿ ಹಿಟಾಚಿ ಟಿಪ್ಪರ್ ಗಳನ್ನು ವಶಕ್ಕೆ ಪಡೆದು ಜಮೀನಿನ ಮಾಲೀಕರಾದ ಹುಸೇನಬಿ, ಶಂಕ್ರಪ್ಪ , ಭಾಗಪ್ಪ , ಹುಲಿಗೆಮ್ಮ, ವೀರೇಶಪ್ಪ , ಶ್ಯಾಮಪ್ಪ, ನಿಂಗಮ್ಮ, ಮಹಾಂಕಾಳಮ್ಮ ಇವರ ವಿರುದ್ದ ಕನಕಗಿರಿ ಠಾಣೆಯಲ್ಲಿ ದೂರು ದಾಖಲಿಸಿದ್ಧಾರೆ.