ಕೊಪ್ಪಳ : ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾಗಿ ಈಗ ಶಿಕ್ಷಕ ವೃತ್ತಿಯಿಂದ ನಿವೃತ್ತಿಯಾಗಿರುವ ಶಂಭುಲಿಂಗನಗೌಡರಿಗೆ 'ಅಭಿಮಾನದ ಅಭಿನಂದನಾ ಸಮಾರಂಭ' ಇಂದು ಮಧುಶ್ರೀ ಗಾರ್ಡನ್ ನಲ್ಲಿ ಜರುಗಿತು.
ಮಠಾಧೀಶರು ರಾಜಕಾರಣಿಗಳು ಗಣ್ಯರು ಶಿಕ್ಷಕರು ಸೇರಿದಂತೆ ನೂರಾರು ಜನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಶಂಭುಲಿಂಗನಗೌಡರು ನಿವೃತ್ತಿಯ ನಂತರ ಯಾವ ರಂಗದಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆ ಜೊತೆಗೆ ಅವರನ್ನು ಬಲ್ಲವರಿಗೆ ಕಾಡಿದ್ದು 'ಗೌಡರು ರಾಜಕೀಯಕ್ಕೆ ಬರಬಹುದಾ ?' ಎಂಬುದು.
ವಿಚಿತ್ರವೆಂದರೆ ಇಂದು ಅವರ ಅಭಿನಂದನಾ ಸಮಾರಂಭದ ಕಾರ್ಯಕ್ರಮದಲ್ಲಿ ಬಿಜೆಪಿಯ ಹೇಮಲತಾ ನಾಯಕ್, ಜೆಡಿಎಸ್ ನ ಸಿ.ವಿ. ಚಂದ್ರಶೇಖರ್ ತಮ್ಮ ಭಾಷಣದಲ್ಲಿ ನೇರವಾಗಿ ಶಂಭುಲಿಂಗನಗೌಡರಿಗೆ ತಮ್ಮ ಪಕ್ಷಕ್ಕೆ ಆಹ್ವಾನಿಸಿದರು.
ಹೇಮಲತಾ ನಾಯಕ ತಾವು ಪಿಯುಸಿ ಓದುವಾಗ ಶಂಭುಲಿಂಗನಗೌಡ್ರು ಡಿಗ್ರಿ ಓದುತ್ತಿದ್ದ ಮತ್ತು ಅವರ ಆಗಿನ ಕಾಲೇಜಿನಲ್ಲಿ ಕಾರ್ಯಚಟುವಟಿಕೆ ನೆನಪುಗಳನ್ನು ಹಂಚಿಕೊಳ್ಳುತ್ತ ಈಗ ಚರ್ಚೆ ಆಗುತ್ತಿದೆ ಗೌಡರು ರಾಜಕೀಯಕ್ಕೆ ಬರಬಹುದು ಅಂತ ಅದಕ್ಕೆ ನಮ್ಮ ಪಕ್ಷಕ್ಕೆ ಬಂದು ಬಿಡ್ರಿ ಅಂತ ಆಗಲೇ ನಾನು ಫೋನ್ ನಲ್ಲಿ ಹೇಳಿದ್ದೇನೆ. ನೀವು ಎಲ್ಲೂ ಹೋಗಂಗಿಲ್ಲ ನಮ್ಮ ಪಕ್ಷಕ್ಕೆ ಬರ್ರಿ ಅಂತ ನೇರ ಅಹ್ವಾನ ನೀಡಿದರು.
ನಂತರ ಮಾತನಾಡಿದ ಜೆಡಿಎಸ್ ರಾಜ್ಯ ಕೋರ್ ಸಮಿತಿ ಸದಸ್ಯರು ಸಿ.ವಿ. ಚಂದ್ರಶೇಖರ ಅವರು ಗೌಡರು ರಾಜಕೀಯಕ್ಕೆ ಬರುವುದಾದರೆ ಈಗ ಘೋಡಾ ಹೈ ಮೈದಾನ್ ಹೈ . ಗೌಡರಿಗೆ ಜೆಡಿಎಸ್ ಬಾಗಿಲು ಸದಾ ತೆರೆದಿರುತ್ತೆ. ನಮ್ಮಲ್ಲಿ (ಜೆಡಿಎಸ್) ಅವಕಾಶಗಳು ಬಹಳ. ನಮಗೆ ಕುಮಾರಣ್ಣನೇ ಹೈಕಮಾಂಡ್ . ನಿಮಗೆ ಪ್ರೀತಿಯಿಂದ ಆಹ್ವಾನ ಕೊಡುತ್ತೇನೆ ನೀವು ಪಕ್ಷಕ್ಕೆ ಬಂದರೆ ಏನೆಲ್ಲ ಸ್ಥಾನಮಾನ ಕೊಡಬೇಕು ಕೊಡ್ತೀವಿ ಎಂದು ನೇರ ಆಹ್ವಾನಿಸಿದರು.
ನಂತರ ಮಾತನಾಡಿದ ಶಂಭುಲಿಂಗನಗೌಡರು ರಾಜಕೀಯದ ಬಗ್ಗೆ ಚಿಂತನ ಮಂಥನ ಮಾಡುತ್ತೇನೆ ಎಂದಷ್ಟೆ ಹೇಳಿ ತಮ್ಮ ವೃತ್ತಿ ಬದುಕು ಹಾಗೂ ಸಂಘಟನೆ ದಿನಗಳ ನೆನಪು ಮೆಲುಕು ಹಾಕಿ ರಾಜಕೀಯ ಸೇರುವ ಬಗ್ಗೆ ಸುಳಿವು ಬಿಟ್ಟು ಕೊಡಲಿಲ್ಲ.
ಕಾರ್ಯಕ್ರಮದಲ್ಲಿ ಸಂಘ ಸಂಸ್ಥೆಗಳ ಮುಖಂಡರು ಕಾಂಗ್ರೆಸ್ ಜೆಡಿಎಸ್ ಬಿಜೆಪಿಯ ಎಲ್ಲ ಗಣ್ಯರನ್ನು ಆಹ್ವಾನಿಸಲಾಗಿತ್ತು. ಆಶ್ಚರ್ಯ ಎಂದರೆ ಆಹ್ವಾನಿಸಿದ್ದ ಕಾಂಗ್ರೆಸ್ಸಿನ 12 ಗಣ್ಯರಲ್ಲಿ ಮಾಜಿ ಸಂಸದ ಸಂಗಣ್ಣ ಕರಡಿ ಬಿಟ್ಟರೆ ಶಾಸಕ ಸಂಸದರು ಸೇರಿ ಕಾಂಗ್ರೆಸ್ ನ 11 ಗಣ್ಯರು ಗೈರು ಹಾಜರಾಗಿದ್ದರು.