ಕೊಪ್ಪಳ : ಜಿಲ್ಲೆಯ ಕಾರಟಗಿ ಪೊಲೀಸ್ ಠಾಣೆ ಮತ್ತು ಪುರಸಭೆಯಲ್ಲಿ ಇಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್ಎಸ್) ಪಕ್ಷ “ಲಂಚಮುಕ್ತ ಕರ್ನಾಟಕ” ಅಭಿಯಾನ ಹಮ್ಮಿಕೊಂಡಿತ್ತು.
ಸಾರ್ವಜನಿಕರು ಸರ್ಕಾರಿ ಕಚೇರಿಗಳಲ್ಲಿ ಯಾವುದೇ ಕೆಲಸಕ್ಕಾಗಿ ಲಂಚ ನೀಡುವ ಪರಿಸ್ಥಿತಿ ನಿರ್ಮಾಣ ಆಗಬಾರದು. ಸರ್ಕಾರಿ ಸೇವೆಗಳು ಸಮಯಕ್ಕೆ ಸರಿಯಾಗಿ ದೊರೆಯಲಿ ಎಂದು ಉದ್ದೇಶ ಕೆಆರ್ಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಪೊಲೀಸ್ ಠಾಣೆ ಮತ್ತು ಪುರಸಭೆಗೆ ಮನವಿ ಸಲ್ಲಿಸಿದರು.
ಕೆ ಆರ್ ಎಸ್ ಪಕ್ಷದ ಯುವ ಮುಖಂಡ ನಿರುಪಾದಿ ಕೆ ಗೊಮರ್ಸಿ ಮಾತನಾಡಿ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಭ್ರಷ್ಟಾಚಾರ ಮತ್ತು ಲಂಚದ ಹಾವಳಿಯಿಂದ ಸಾಮಾನ್ಯ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಜನಸಾಮಾನ್ಯರ ಹಕ್ಕಿನ ಸೇವೆಗಳನ್ನು ಪಡೆಯಲು ಅನಗತ್ಯ ವಿಳಂಬ ಹಾಗೂ ಹಣದ ಬೇಡಿಕೆಗಳು ಕಂಡುಬರುತ್ತಿವೆ. ಇಂಥ ಪ್ರವೃತ್ತಿ ತಡೆಯಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
ಪೊಲೀಸ್ ಠಾಣೆಯಲ್ಲಿ ದೂರುಗಳ ಸ್ವೀಕಾರ, ತನಿಖೆ ಹಾಗೂ ಸಾರ್ವಜನಿಕರೊಂದಿಗೆ ನಡೆದುಕೊಳ್ಳುವ ವಿಚಾರದಲ್ಲಿ ಪಾರದರ್ಶಕತೆ ಕಾಪಾಡಬೇಕು. ಪುರಸಭೆಯಲ್ಲಿ ತೆರಿಗೆ, ಖಾತೆ, ಪರವಾನಗಿ, ಕುಡಿಯುವ ನೀರು ಹಾಗೂ ಇತರೆ ನಾಗರಿಕ ಸೇವೆಗಳನ್ನು ಯಾವುದೇ ಲಂಚವಿಲ್ಲದೆ ಒದಗಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕೆಆರ್ಎಸ್ ಪಕ್ಷದ ರಾಜ್ಯ ರೈತ ಘಟಕದ ಕಾರ್ಯದರ್ಶಿ ಕನಕಪ್ಪ ಉಡೆಜಾಲಿ, ಕೊಪ್ಪಳ ಜಿಲ್ಲಾ ಸಂಚಾಲಕ ಗಣೇಶ್ ಅಮೃತ್, ಉಮೇಶ್ ಕುಮಾರ್ ಸಾರಂಗಿ, ಮೈನುದ್ದೀನ್, ಶಾಮಿದ ಅಲಿ ಹುಲಿ ಹೈದರ್, ಹನುಮಂತಪ್ಪ , ಹನುಮೇಶ್, ಅಮಾಂತಪ್ಪ ಜೂಲ್ ಕುಂಟೆ, ಸೇರಿದಂತೆ ಸ್ಥಳೀಯ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.