ಕೊಪ್ಪಳ : ಡಿ.ಕೆ. ಶಿವಕುಮಾರ ನೂತನ ಮುಖ್ಯಮಂತ್ರಿ ಆದ ಸಂದರ್ಭ ಸಂಭ್ರಮಿಸಲು ಜಿಲ್ಲೆಯ ಕಾಂಗ್ರೆಸ್ ನಲ್ಲಿ ನಿರಾಸಕ್ತಿ ಮೂಡಿತಾ ? ಎಂಬ ಪ್ರಶ್ನೆ ಕಾಂಗ್ರೆಸ್ ಕಾರ್ಯಕರ್ತರಲ್ಲದೆ ಸಾರ್ವಜನಿಕರಲ್ಲೂ ಚರ್ಚೆ ಹುಟ್ಟು ಹಾಕಿದೆ.
ಅತ್ತ ಡಿ.ಕೆ.ಶಿವಕುಮಾರ ಪ್ರಮಾಣ ವಚನ ತೆಗೆದುಕೊಂಡರೆ ಜಿಲ್ಲೆಯ ಗಂಗಾವತಿ, ಕುಷ್ಟಗಿ ಬಿಟ್ಟರೆ ಕನಕಗಿರಿ ಕೊಪ್ಪಳ ಯಲಬುರ್ಗಾದಲ್ಲಿ ಕಾಂಗ್ರೆಸ್ಸಿಗರ ಸಂಭ್ರಮ ಇರಲಿಲ್ಲ. ಒಂದು ಬ್ಯಾನರೂ ಕಾಣಲಿಲ್ಲ.
2023ರ ಚುನಾವಣೆಯಲ್ಲಿ ಸೋತಿರುವ ಬಯ್ಯಾಪುರರ ಕುಷ್ಟಗಿಯಲ್ಲಿ ಇಕ್ಬಾಲ್ ಅನ್ಸಾರಿಯ ಗಂಗಾವತಿಯಲ್ಲಿ ಅವರ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರೆ, ಗೆದ್ದು ಅಧಿಕಾರದಲ್ಲಿರುವ ಹಿಟ್ನಾಳ ತಂಗಡಗಿ ರಾಯರೆಡ್ಡಿ ಕ್ಷೇತ್ರದಲ್ಲಿ ಸಂಭ್ರಮ ಕಾಣಲಿಲ್ಲ.
ಗೆದ್ದಿರುವ ಈ ಮೂವರಲ್ಲಿ ಮಂತ್ರಿಯಾಗಿದ್ದ ಶಿವರಾಜ ತಂಗಡಿಗೆ ಡಿಕೆಶಿ ಸರ್ಕಾರದಲ್ಲೂ ಮುಂದುವರೆಯಲು ಮತ್ತು ಹೊಸದಾಗಿ ರಾಘವೇಂದ್ರ ಹಿಟ್ನಾಳ, ಬಸವರಾಜ ರಾಯರೆಡ್ಡಿ ಮಂತ್ರಿ ಆಗಲು ಪ್ರಯತ್ನಿಸಿದ್ದರು.
ಆದರೆ ಹೊಸ ಸರ್ಕಾರದ ಮೊದಲ ದಿನ ಈ ಮೂವರಲ್ಲಿ ಯಾರೊಬ್ಬರೂ ಮಂತ್ರಿಯಾಗಿಲ್ಲ. ಅದೇ ಕಾರಣಕ್ಕೆ ಮೂರೂ ಕ್ಷೇತ್ರದಲ್ಲಿ ಇವರ ಬೆಂಬಲಿಗರು ಸಂಭ್ರಮಾಚರಣೆ ಮಾಡಲಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.
ಆಗಾಗ ಪ್ರತಿಭಟನೆ, ಪತ್ರಿಕಾ ಹೇಳಿಕೆ ಮೂಲಕ ಸದ್ದು ಮಾಡುವ ಮಹಿಳಾ ಕಾಂಗ್ರೆಸ್ ಕೂಡ ಸಂಭ್ರಮಾಚರಣೆ ಮಾಡಲಿಲ್ಲ.
ಕೊಪ್ಪಳದಲ್ಲಿ ಕೆ.ಎಂ ಸೈಯದ್ ಅಲ್ಲೊಂದು ಇಲ್ಲೊಂದು ಬ್ಯಾನರ್ ಹಾಕಿಸಿದ್ದರೆ ಶಾಸಕರು ಸಂಸದರು ಇರುವ ಜಿಲ್ಲಾ ಕೇಂದ್ರದಲ್ಲಿ ಸಂಭ್ರಮಾಚರಣೆ ಆಗದೇ ಇರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಬೇಸರ ಉಂಟು ಮಾಡಿದೆ.
ಐದೂ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಒಂದೊಂದು ದಿಕ್ಕಿನಂತಾಗಿದ್ದು ಕಾಂಗ್ರೆಸ್ ಸಂಘಟನಾ ಸಮಸ್ಯೆ ಜೊತೆಗೆ ಸಮನ್ವಯದ ಸಮಸ್ಯೆಯನ್ನೂ ಎದುರಿಸುತ್ತಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.