ಕೊಪ್ಪಳ : ಹುಲಿಗೆಮ್ಮದೇವಿ ಜಾತ್ರೆಗೆ ಹೊರಟಿದ್ದ ಭಕ್ತರ ಡ್ರಾಕ್ಟರ್ ಗೆ ಲಾರಿಯೊಂದು ಹಿಂದಿನಿಂದ ಗುದ್ದಿದ ಪರಿಣಾಮ ಟ್ರಾಕ್ಟರ್ ತುಂಗಭದ್ರಾ ಸೇತುವೆ ಮೇಲಿನಿಂದ ನದಿಗೆ ಬಿದ್ದು ಒಂದು ವರ್ಷದ ಮಗು ಸೇರಿ 6 ಜನ ಸಾವಿಗೀಡಾದ ದಾರುಣ ಘಟನೆ ಇಂದು ಮಧ್ಯಾಹ್ನ 3 ರ ಸುಮಾರಿಗೆ ಜರುಗಿದೆ.
ಈ ದುರ್ಘಟನೆಯಲ್ಲಿ 10 ಜನ ಗಂಭೀರ ಗಾಯಗೊಂಡಿದ್ದಾರೆ. ಮೃತರು ಹಾಗೂ ಗಾಯಾಳುಗಳು ಸಂಡೂರು ತಾಲೂಕು ಮಲ್ಲಾರಹಳ್ಳಿ ಮತ್ತು ಯಶವಂತಪುರದವರು.
ಘಟನೆ ತುಂಗಭದ್ರಾ ಡ್ಯಾಂ ಮುಂಭಾಗದಲ್ಲಿರುವ ವಾಹನಗಳ ಸಂಚಾರದ ಸೇತುವೆ ಕೆಳಗೆ ಅಂದ್ರೆ ಟಿ.ಬಿ.ಡ್ಯಾಂ ಸರ್ಕಲ್ ನಿಂದ ಒಂದೂವರೆ ಕಿ.ಮೀ ದೂರದಲ್ಲಿ ನಡೆದಿದೆ
ಸಾವಿಗೀಡಾದವರನ್ನು ಭರತ್ (1) ಗೌರಮ್ಮ , ಗೀತಾ (20),
ಮಹಾಂತೇಶ (18), ಮಂಜಪ್ಪ , ಕೆಂಚಪ್ಪ ಎಂದು ಗೊತ್ತಾಗಿದೆ.
ಗಾಯಗೊಂಡವರನ್ನು ಮಲ್ಲಾರಹಳ್ಳಿಯ ರೇಣುಕಮ್ಮ ,
ಅರುಣಮ್ಮ, ಯಶವಂತಪುರದ ನಾಗರಾಜ, ಸವಿತಾ,
ಚೇತನಾ, ಅಂಜಲಿ, ಅರ್ಜುನ , ರತ್ನಮ್ಮ ಮಾಯಾ,
ಅಜಯ ಹಾಗೂ ಇನ್ನು ಮೂವರ ಹೆಸರು ತಿಳಿದು ಬಂದಿಲ್ಲ.
ದುರ್ಘಟನೆಗೆ ಕಾರಣವಾದ ಲಾರಿ ಚಾಲಕ ಪೊಲೀಸ್ ವಶದಲ್ಲಿದ್ದಾನೆ. ಈ ಲಾರಿ ಬೆಂಗಳೂರಿನಿಂದ ರಾಜಸ್ಥಾನಕ್ಕೆ ತೆರಳುತ್ತಿದ್ದ ಕೊರಿಯರ್ ಸಂಸ್ಥೆಗೆ ಸೇರಿದೆ.
ನದಿಗೆ ಬಿದ್ದ ಟ್ರಾಕ್ಟರ್ ಭಾಗಶಃ ಹಾನಿಗೀಡಾಗಿದ್ದು ಟ್ರಾಕ್ಟರ್ ನಲ್ಲಿದ್ದ ಅಡುಗೆ ಸಾಮಾನು ಹಾಸಿಗೆ ತರಕಾರಿ ಡ್ರಮ್ಮು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಅಪಘಾತದ ಭೀಕರತೆಗೆ ಸಾಕ್ಷಿಯಾಗಿವೆ.
ವಿಜಯನಗರ ಜಲ್ಲೆಯ ಟಿ.ಬಿ.ಡ್ಯಾಂ ಪೊಲೀಸ್ ಠಾಣೆಯ ಸರಹದ್ದು ಆರಂಭವಾಗುವ 40 ಅಡಿ ಮುಂಚೆಯೆ ಈ ದುರ್ಘಟನೆ ನಡೆದಿದ್ದು ಮುನಿರಾಬಾದ್ ಪೊಲೀಸ್ ಅಧಿಕಾರಿ ಸಿಬ್ಬಂದಿ ಹಾಗೂ ಕೊಪ್ಪಳ ಡಿವೈಎಸ್ಪಿ ಘಟನಾ ಸ್ಥಳದಲ್ಲಿದ್ದಾರೆ.
ಬಳ್ಳಾರಿ ವಲಯದ ಐಜಿಪಿ ಡಾ. ಹರ್ಷ ಘಟನಾ ಸ್ಥಳಕ್ಕೆ ಭೇಟಿ ನೀಡಿದರು.