ಕೊಪ್ಪಳ : ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ನಿನ್ನೆ ವಿವಿಧ ಬೇಡಿಕೆಗಳೊಂದಿಗೆ ಕೊಪ್ಪಳದ ಬಸ್ ನಿಲ್ದಾಣದಿಂದ ಎಸ್ ಪಿ ಕಚೇರಿವರೆಗೆ ಪ್ರತಿಭಟನೆ ನಡೆಸಿ ಎಸ್ಪಿ ಅವರಿಗೆ ಮನವಿ ಸಲ್ಲಿಸಿತು.
ಕುಷ್ಟಗಿ ತಾಲೂಕು ತಾವರಗೆರೆಯಲ್ಲಿ ಜಾತಿ ನಿಂದನೆಗೆ ಒಳಗಾದ ಉಪನ್ಯಾಸಕಿ ದೂರು ದಾಖಲಿಸಿದ್ದು ಆ ದೂರನ್ನು ವಾಪಸ್ ಪಡೆಯುವಂತೆ ಜೀವ ಬೆದರಿಕೆ ಹಾಕುತ್ತಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು.
ಯಲಬುರ್ಗಾ ತಾಲೂಕಿನ ಕೋನಸಾಗರದಲ್ಲಿ ದಲಿತರ ಮನೆಗೆ ಬೆಂಕಿ ಹಚ್ಚಿದವರನ್ನು ಇವರಿಗೂ ಬಂಧಿಸಿಲ್ಲ. ಬದಲಾಗಿ ದಲಿತ ಯುವಕ ಮೌನೇಶ್ ಹಾಗೂ ಇತರರನ್ನು ರೌಡಿ ಶೀಟರ್ ಗಳಾಗಿ ಮಾಡಿದ್ದು ಈ ಪ್ರಕರಣದಲ್ಲಿ ಕರ್ತವ್ಯ ಲೋಪ ಮಾಡಿರುವ ಸಿಪಿಐ, ಪಿಎಸ್ಐ ಸಸ್ಪೆಂಡ್ ಮಾಡಬೇಕು.
ಕಾಣೆಯಾಗಿರುವ ಕೊಪ್ಪಳ ತಾಲೂಕಿನ ಬಿ ಹೊಸಳ್ಳಿಯ ಅಕ್ಷತಾ ಪತ್ತಹಚ್ಚಬೇಕು. ಅಕ್ಷತಾ ಪ್ರಕರಣದಲ್ಲಿ ಗ್ರಾಮೀಣ ಪೊಲೀಸರು ನಿರ್ಲಕ್ಷ್ತ ವಹಿಸಿದ್ದು ವಾರದಲ್ಲಿ ಅಕ್ಷತಾ ಪತ್ತೆಯಾಗದಿದ್ದರೆ ಎಸ್ಪಿ ಕಚೇರಿ ಮುಂದೆ ನಿರಂತರ ಧರಣಿ ಮಾಡುತ್ತೇವೆ.
ದಲಿತರಿಗೆ ಕ್ಷೌರ ನಿರಾಕರಿಸಿದ ಪ್ರಕರಣದಿಂದ ಗದಗ ಜಿಲ್ಲೆಯಲ್ಲಿ ಪೊಲೀಸ್ ಭದ್ರತೆಯಲ್ಲಿ ಕ್ಷೌರದ ಅಂಗಡಿ ತೆರೆದಿದ್ದು ಅದೇ ರೀತಿ ಕೊಪ್ಪಳ ಜಿಲ್ಲೆಯಲ್ಲಿ ಪೊಲೀಸ್ ಭದ್ರತೆಯಲ್ಲಿ ಹೋಟೆಲ್, ಕಿರಾಣಿ ಅಂಗಡಿ, ಕ್ಷೌರದ ಅಂಗಡಿ ಆರಂಭಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಕರಿಯಪ್ಪ ಗುಡಿಮನಿ, ಮುಖಂಡರಾದ ಮುದುಕಪ್ಪ ಹೊಸಮನಿ, ದುರ್ಗೇಶ ಬರಗೂರು, ಶೋಭಾ ಪೂಜಾರ, ಗೌರಿ ಗೋನಾಳ, ಹುಲುಗಪ್ಪ ಹ್ಯಾಟಿ , ಚೆನ್ನಮ್ಮ ಜಾಲಗಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.