ಕೊಪ್ಪಳ : ಹುಲಿಕೆರೆ ದಡದಲ್ಲಿ ಇರುವ ಹ. ಗುಲಾಬ್ ಷಾ ವಲಿ ದರ್ಗಾಕ್ಕೆ ಹೋಗುವ ರಸ್ತೆ ವಿವಾದ ಇಂದು ಮತ್ತೆ ಆರಂಭವಾಗಿತ್ತು.
ನಗರಸಭೆ ಪೌರಾಯುಕ್ತರು ಹಾಗೂ ಅಧಿಕಾರಿ ಸಿಬ್ಬಂದಿಗಳು ನಿರ್ಮಾಣ ಹಂತದ ರಸ್ತೆ ತೆರವುಗೊಳಿಸಲು ಹೋದಾಗ ದರ್ಗಾ ಬಳಿಯ ನಿವಾಸಿಗಳು , ನಗರದ ಮುಸ್ಲಿಂ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು.
ದರ್ಗಾಗೆ ರಸ್ತೆ ನಿರ್ಮಿಸಲು ಕೆರೆ ಒತ್ತುವರಿ ಮಾಡಲಾಗಿದೆ ಎಂದು ಮೊನ್ನೆ ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ , ಡಾ. ಬಸವರಾಜ ಕ್ಯಾವಟರ್ ಹಾಗೂ ಇತರರು ಕಾಮಗಾರಿ ಸ್ಥಳದಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಅಂದು ಕೆರೆ ಒತ್ತುವರಿ ಬಗ್ಗೆ ಸರ್ವೆ ನಡೆಯಲಿ ಎಂಬ ಒತ್ತಾಯ ಕೇಳಿ ಬಂದಿತ್ತು.
ಆದರೆ ಇಂದು ನಗರಸಭೆ ಪೌರಾಯುಕ್ತರು ಹಾಗೂ ಸಿಬ್ಬಂದಿ ಹುಲಿಕೆರೆ ಸರ್ವೆ ವರದಿ ಮತ್ತು ಒತ್ತುವರಿ ತೆರವು ಆದೇಶ ಇಲ್ಲದೆ ರಸ್ತೆ ತೆರವು ಮಾಡಲು ಹೋದಾಗ ಅಲ್ಲಿನ ನಿವಾಸಿಗಳು ತೆರವಿಗೆ ವಿರೋಧ ವ್ಯಕ್ತಪಡಿಸಿದರು. ಈ ಸಂದರ್ಭ ಕೆಲ ಕಾಲ ಗೊಂದಲ ಏರ್ಪಟ್ಟಿತ್ತು.
ಕೆರೆ ಒತ್ತುವರಿ ಆಗಿರುವ ಸರ್ವೆ ವರದಿ ಇಲ್ಲದ ಕಾರಣ ಜನರ ತಕರಾರಿಗೆ ಮಣಿದು ನಗರಸಭೆ ಪೌರಾಯುಕ್ತರು ಹಾಗೂ ಸಿಬ್ಬಂದಿ ವಾಪಸ್ ತೆರಳಿದರು.