ಕೊಪ್ಪಳ : ಕಾರ್ಖಾನೆ ವಿಸ್ತರಣೆ ಹಾಗೂ ತಾಲೂಕಿನ ಕಾರ್ಖಾನೆಗಳಿಂದ ಬಾಧಿತ ಗ್ರಾಮಗಳಿಗೆ ಮುಖ್ಯಮಂತ್ರಿ ಭೇಟಿ ಆಗ್ರಹಿಸಿ ನಡೆದ ಕೊಪ್ಪಳ–ಭಾಗ್ಯನಗರ ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ಬೆಳಗ್ಗೆಯಿಂದ ಅಂಗಡಿಗಳು ತೆರೆಯದೆ ವ್ಯಾಪಾರಸ್ಥರು ಬಂದ್ಗೆ ಸಾಥ್ ನೀಡಿದರು.
ಸಾವಿರಾರು ಜನರ ಮೆರವಣಿಗೆ
ಬಾಧಿತ ಗ್ರಾಮಗಳಿಂದ ವಿದ್ಯಾರ್ಥಿಗಳು, ಮಹಿಳೆಯರು ತೊಟ್ಟಿಲು ಹಾಗೂ ಸರ್ಕಾರದ ಶವದ ಪ್ರತಿಕೃತಿಯೊಂದಿಗೆ ಆಗಮಿಸಿದ್ದು ಹೋರಾಟ ತೀವ್ರತೆ ಪಡೆದಿರುವುದು ಸ್ಪಷ್ಟವಾಯಿತು. ಮೆರವಣಿಗೆಯಲ್ಲಿ ಸಾವಿರಾರು ಜನ ಭಾಗವಹಿಸಿದರು.
ರದ್ದು ಆದೇಶ ಇಲ್ಲ
ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಜಿ ನೇತೃತ್ವದಲ್ಲಿ ಕಳೆದ ವರ್ಷ ನಡೆದ ಹೋರಾಟಕ್ಕೆ ಇಂದಿಗೆ ಒಂದು ವರ್ಷವಾದರೂ ಕಾರ್ಖಾನೆ ವಿಸ್ತರಣೆ ಆದೇಶ ಜಾರಿ ಆಗಿಲ್ಲ ಎಂಬ ಅಸಮಾಧಾನ ವ್ಯಕ್ತವಾಯಿತು.
ಶಾಸಕರ ವಿರುದ್ದ ಆಕ್ರೋಶ
117 ದಿನಗಳಿಂದ ನಡೆಯುತ್ತಿರುವ ಅನಿರ್ದಿಷ್ಟ ಧರಣಿಯತ್ತ ಶಾಸಕ ರಾಘವೇಂದ್ರ ಹಿಟ್ನಾಳ ಗಮನ ಹರಿಸಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದ್ದರೂ, ಇಂದಿನ ಬಂದ್ ಮೆರವಣಿಗೆಯಲ್ಲಿ ಅವರ ಭಾಗವಹಿಸುವಿಕೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಯಿತು.
“ಜೀವಕ್ಕೆ ಗ್ಯಾರಂಟಿ ಕೊಡಿ” ಘೋಷಣೆ
ಗವಿಮಠ ಆವರಣದಲ್ಲಿ ಹೋರಾಟಗಾರರು “ಗ್ಯಾರಂಟಿ ಕೊಡಿ, ಜೀವಕ್ಕೆ ಗ್ಯಾರಂಟಿ ಕೊಡಿ” ಎಂದು ಘೋಷಣೆ ಕೂಗಿದರು.
ಧೂಳಿನ ಬೆಳೆಗಳ ಪ್ರದರ್ಶನ
ರೈತರು ಕಾರ್ಖಾನೆ ಧೂಳಿನಿಂದ ಹಾನಿಗೊಳಗಾದ ಬಾಳೆ, ಪೇರಲ, ದಾಳಿಂಬೆ, ಕರಿಬೇವು ಸೇರಿದಂತೆ ಬೆಳೆಗಳನ್ನು ಟ್ರಾಕ್ಟರ್ನಲ್ಲಿ ತಂದು ತೋರಿಸಿದರು. ವಿದ್ಯಾರ್ಥಿಗಳು ಘೋಷಣೆ ಕೂಗಿದರು.
ಎಂಟು ವರ್ಷದ ಹೋರಾಟಗಾರ
ಹರ್ಷರಾಜ ಎಂಬ ಎಂಟು ವರ್ಷದ ಬಾಲಕ ಉಸಿರಾಟದ ಮಾಸ್ಕ್ ಧರಿಸಿ ಸೈಕಲ್ನಲ್ಲಿ ಆಗಮಿಸಿ ಸಮಸ್ಯೆಯತ್ತ ಗಮನ ಸೆಳೆದ.
ಸರ್ಕಾರದ ಪ್ರತಿಕೃತಿ ದಹನ
ಅಶೋಕ ಸರ್ಕಲ್ನಲ್ಲಿ ಸರ್ಕಾರದ ಶವದ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಸಾಣೆಹಳ್ಳಿ ಸ್ವಾಮಿಜಿ, ಕಬೀರಾನಂದ ಸ್ವಾಮಿಜಿ, ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಸೇರಿದಂತೆ ಸಾವಿರಾರು ಜನ ಭಾಗವಹಿಸಿದರು. ನಗರಸಭೆ ಹತ್ತಿರ ಬಹಿರಂಗ ಸಭೆ ನಡೆಯುತ್ತಿದೆ.