ಕೊಪ್ಪಳ : ಈವರೆಗೆ ಮುಂಬೈ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಹಿಡಿದಿರಲಿಲ್ಲ ಈಗ ಅಧಿಕಾರ ಹಿಡಿಯುತ್ತೆ ಅದು ವೋಟ್ ಚೋರಿ ಅಲ್ಲ ದಿಲ್ ಚೋರಿ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಅವರು ಶುಕ್ರವಾರ (ಜ. 16) ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತ ಪ್ರೀತಿ ವಿಶ್ವಾಸದಿಂದ ಜನರ ಸೇವೆ ಮಾಡಿದರೆ ಮತ ಮಾತ್ರ ಅಲ್ಲ ಅವರು ಹೃದಯವನ್ನೆ ಕೊಡುತ್ತಾರೆ ಹಾಗೆ ಮೋದಿಜಿಯವರು ಈಗ ದೇಶದ ಜನರ ದಿಲ್ ಚೋರಿ ಮಾಡುತ್ತಿದ್ದಾರೆ ಎಂದು ಅವರು ಮುಂಬೈ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಗೆಲುವನ್ನ ಬಣ್ಣಿಸಿದರು.
ವೋಟ್ ಚೋರಿ ಅನ್ನೋರಿಗೆ ಅಪ್ಪರ್ ಚೇಂಬರ್ ಖಾಲಿ ಇದೆ ಅಂದ್ರೆ ಮೆದುಳಿಲ್ಲ ಅವರಿಗೆ. ಮೆದುಳಿಗೂ ನಾಲಗೆಗೂ ಕನೆಕ್ಟಿವಿಟಿ ಇಲ್ಲದ್ದರಿಂದ ಈ ರೀತಿ ಮಾತಾಡ್ತಾರೆ.
ಈ ದೇಶದ ವಿರೋಧ ಪಕ್ಷದ ನಾಯಕರು ಎಂಥ ಬುದ್ಧಿವಂತರು ರಿ ಅವರು ? ಪಾಪ ಅವರನ್ನು ಅರ್ಥಾನೆ ಮಾಡಿಕೊಂಡಿಲ್ಲ ಈ ಜನ.
ದೆಹಲಿಯಲ್ಲಿ ಪೊಲ್ಯೂಶನ್ ಜಾಸ್ತಿ ಆಗ್ಬಿಟ್ಟಿದೆ ಅಂತೆ. ಏಕೆ ಹೆಚ್ಚಾಗಿದೆ ಅಂದ್ರೆ ಅವರ ಪ್ರಕಾರ ವೋಟ್ ಜೋರಿ ಆಗಿದ್ದಕ್ಕೆ ಅಂತೆ. ಎಂಥಾ ಮೇಧಾವಿಗಳು ಈ ದೇಶದಲ್ಲಿದ್ದಾರೆ ಎಂದು ಅವರು ವ್ಯಂಗವಾಗಿ ಹೇಳಿದರು.
ರಾಜ್ಯದಲ್ಲಿ ಅಭಿವೃದ್ಧಿ ನಿಂತು ಹೋಗಿದ್ದು 5 ಗ್ಯಾರಂಟಿಗಳ ಹೆಸರಲ್ಲಿ 5 ವರ್ಷ ಮುಗಿಸುವ ಇಚ್ಚೆ ಇದ್ದಂತಿದೆ. ಎರಡೂವರೆ ವರ್ಷದಲ್ಲಿ ಕಲಬುರ್ಗಿಯಲ್ಲಿ ನಾಲ್ಕು ಸಲ ಸಚಿವ ಸಂಪುಟದ ವಿಶೇಷ ಸಭೆ ಮಾಡಿ 24 ಸಾವಿರ ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡಿದ್ದು ಅದರಲ್ಲಿ 24 ಸಾವಿರ ರೂಪಾಯಿ ಕೂಡ ಬಿಡುಗಡೆ ಆಗಿಲ್ಲ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷರು ಬಸವರಾಜ ದಡೇಸೂಗುರು, ಮುಖಂಡರಾದ ಡಾ. ಬಸವರಾಜ ಕ್ಯಾವಟರ್, ನವೀನ್ ಗುಳಗಣ್ಣವರ, ಚಂದ್ರಶೇಖರಗೌಡ ಪಾಟೀಲ್ ಹಲಗೇರಿ ಹಾಗೂ ಇತರರು ಉಪಸ್ಥಿತರಿದ್ದರು.