ಕೊಪ್ಪಳ : ಜೆಡಿಎಸ್ ಪಕ್ಷ ಕೊಪ್ಪಳ ಕ್ಷೇತ್ರದಲ್ಲಿ ಬೂತ್ ವಾರು ಸದಸ್ಯರು, ಪದಾಧಿಕಾರಿ ನೇಮಕದ ಮೂಲಕ ಬಲಿಷ್ಠವಾಗುವ
ಕಾರ್ಯ ಆರಂಭಿಸಿದೆ.
ಸಧ್ಯ ನಗರಸಭೆ ಚುನಾವಣೆ ಬರುವ ಸಾಧ್ಯತೆ ಹಿನ್ನಲೆಯಲ್ಲಿ
ಸುಮಾರು ಒಂದು ಲಕ್ಷ ಜನಸಂಖ್ಯೆಯ ಕೊಪ್ಪಳ ನಗರದಲ್ಲಿ 67 ಮತದಾನ ಕೇಂದ್ರಗಳಿದ್ದು ಅಂದಾಜು 68 ಸಾವಿರ ಮತದಾರರು ಇದ್ದಾರೆ. ನಗರದಲ್ಲಿ ಶೇ. 33 ರಷ್ಟು ಅಲ್ಪಸಂಖ್ಯಾತ ಮತದಾರರು ಇದ್ದಾರೆ.
ಜೆಡಿಎಸ್ ಈಗ ನಗರದಲ್ಲಿ 20 ಸಾವಿರ ಸದಸ್ಯತ್ವದ ಗುರಿ ಹೊಂದಿದೆ. ಅಂದರೆ ನಗರದ ಶೇ. 30 ರಷ್ಟು ಮತದಾರರನ್ನು ಜೆಡಿಎಸ್ ಪಕ್ಷದತ್ತ ಸೆಳೆಯುವ ಗುರಿಯೊಂದಿಗೆ ಇತ್ತೀಚಿಗೆ ಜೆಡಿಎಸ್ ಅಭ್ಯರ್ಥಿ ಸಿ.ವಿ.ಚಂದ್ರಶೇಖರ, ಜೆಡಿಎಸ್ ಜಿಲ್ಲಾಧ್ಯಕ್ಷರು ಸುರೇಶ ಭೂಮರಡ್ಡಿ ನೇತೃತ್ವದಲ್ಲಿ ಸಭೆ ನಡೆದಿದೆ.
2023 ರ ವಿಧಾನಸಭೆ ಚುನಾವಣೆಯಲ್ಲಿ ಕೇವಲ 20 ದಿನದಲ್ಲಿ ಸಿ.ವಿ.ಚಂದ್ರಶೇಖರ 45 ಸಾವಿರ ಮತ ಪಡೆದದ್ದು ಗಮನ ಸೆಳೆದಿದೆ. ಆ ಮೂಲಕ ಕೊಪ್ಪಳ ರಾಜಕೀಯ ತಮ್ಮನ್ನು ಕಡೆಗಣಿಸುವಂತಿಲ್ಲ ಎಂಬ ಮೆಸೆಜ್ ಸಿವಿಸಿ ಕೊಟ್ಟಂತಾಗಿದೆ.
ಈಗಾಗಲೇ ನಗರಸಭೆಯ 31 ವಾರ್ಡ್ ಗಳಿಗೆ ಮೀಸಲಾತಿ ಪ್ರಕಟವಾಗಿದ್ದು ಕೆಲ ವಾರ್ಡ್ ಮೀಸಲಾತಿಗೆ ಆಕ್ಷೇಪಣೆ ಸಲ್ಲಿಕೆಯಾಗಿವೆ. ಈಗ ಅಂತಿಮ ಮೀಸಲಾತಿ ಪಟ್ಡಿ ಪ್ರಕಟವಾಗುವುದು ಬಾಕಿ ಇದೆ.
ಹಾಗಾಗಿ ಜೆಡಿಎಸ್ ನ ಈ ಸಂಘಟನಾ ನಡೆ ಕುತೂಹಲ ಕೆರಳಿಸಿದೆ. ಯುವಕರು ಮಹಿಳೆಯರು ಹೊಸ ಮತದಾರರನ್ನು ಪಕ್ಷದತ್ತ ಸೆಳೆಯುವ ಗುರಿ ಇದೆ ಎಂದು ತಿಳಿದು ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಪಕ್ಷದ ಪ್ರಚಾರ ಮತ್ತು ಪಕ್ಷದ ಕಾರ್ಯಕರ್ತರ ಜೊತೆ ಸಂಪರ್ಕಕ್ಕಾಗಿ ವಾಟ್ಸಾಪ್ ಗುಂಪುಗಳು ರಚನೆಯಾಗಲಿವೆ. ಪಕ್ಷದ ಸಂಘಟನೆ ಹಾಗೂ ಸಾರ್ವಜನಿಕರ ಜೊತೆ ಉತ್ತಮ ಬಾಂಧವ್ಯ ಹೊಂದಿದವರಿಗೆ ನಗರಸಭೆ ಚುನಾವಣೆಯಲ್ಲಿ ಟಿಕೆಟ್ ನೀಡುವ ಯೋಜನೆ ಜೆಡಿಎಸ್ ಹೊಂದಿದೆ ಎನ್ನಲಾಗಿದೆ.
ಜೆಡಿಎಸ್ ನ ಈ ಸಭೆಯಲ್ಲಿ ನಗರದ ಹಲವು ಜನ ಜೆಡಿಎಸ್ ಗೆ ಸೇರ್ಪಡೆಯಾದರು ಎಂದು ತಿಳಿದು ಬಂದಿದೆ.