ಜಿಲ್ಲಾ ಕೇಂದ್ರಕ್ಕೆ ವಿಶ್ವವಿದ್ಯಾಲಯ ಬಂದಿಲ್ಲ. ಭಾನಾಪುರದಲ್ಲಿ ಇರುವ ವಿವಿಯಲ್ಲಿ ಸರಿಯಾದ ಸೌಲಭ್ಯವಿಲ್ಲ. ಕ್ಷೇತ್ರದಲ್ಲಿ ರಸ್ತೆಗಳು ಹಾಳಾಗಿವೆ. ಮೆಡಿಕಲ್ ಕಾಲೇಜ್ ಇದ್ರೂ ಉತ್ತಮ ವೈದ್ಯಕೀಯ ಸೇವೆ ಸಿಗುತ್ತಿಲ್ಲ ಇಂಥ ಹತ್ತಾರು ಸಮಸ್ಯೆಗಳ ಬಗ್ಗೆ ಕೊಪ್ಪಳದ ವಿಕೆಂಡ್ ಶಾಸಕ ರಾಘವೇಂದ್ರ ಹಿಟ್ನಾಳ ಸದನದಲ್ಲಿ ಮಾತಾಡಲಿ ಎಂದು ಜೆಡಿಎಸ್ ಆಗ್ರಹಿಸಿದೆ.
ಕೊಪ್ಪಳ : ನಾಳೆ ಡಿ.8 ರಿಂದ ಬೆಳಗಾವಿಯಲ್ಲಿ ಆರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಈ ಸಲವಾದರೂ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿ ಪರಿಹಾರ ಹುಡುಕಲಿ. ಇಲ್ಲ ಮತದಾರರ ಕ್ಷಮೆ ಕೇಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಜೆಡಿಎಸ್ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಆಗ್ರಹಿಸಿದ್ದಾರೆ.
'ಕ್ಷೇತ್ರಾದ್ಯಂತ ರಸ್ತೆಗಳು ಹದಗೆಟ್ಟಿವೆ. ಕಾಸನಕಂಡಿ ಗ್ರಾಮಕ್ಕೆ ಎರಡು ತಿಂಗಳಿಂದ ಬಸ್ ಸೇವೆ ಸ್ಥಗಿತಗೊಂಡಿದೆ. ಬಸ್ ಸೇವೆಗಾಗಿ ವಿದ್ಯಾರ್ಥಿಗಳು ರಸ್ತೆಗಿಳಿದಿದ್ದಾರೆ. ತ್ಯಾಜ್ಯ ವಿಲೇವಾರಿ ಘಟಕ ಹಾಗೂ ಮೆಕ್ಕೆಜೋಳ ಖರೀದಿ
ಕೇಂದ್ರಗಳು ಕಾರ್ಯಾರಂಭ ಮಾಡಿಲ್ಲ. ಮಾದಕ ವಸ್ತು ಮಾರಾಟ ಮಿತಿ ಮೀರಿದೆ. ಗವಿಶ್ರೀ ಅವರ ಪ್ರಯತ್ನದಿಂದ
ಹಿರೇಹಳ್ಳ ಸ್ವಚ್ಛಗೊಂಡು ಬ್ಯಾರೇಜ್ ನಿರ್ಮಾಣವಾಗಿವೆ. ಆದರೆ ಹಿರೇಹಳ್ಳಕ್ಕೆ ಚರಂಡಿ ನೀರು ಹರಿ ಬಿಡುವ ವ್ಯವಸ್ಥೆ ಹಾಗೆಯೇ ಮುಂದುವರೆದಿದೆ.
ಏತ ನೀರಾವರಿ ಯೋಜನೆಗಳು ಶೈತ್ಯಾಗಾರದಲ್ಲಿವೆ. ಈ ಸಮಸ್ಯೆಗಳಿಗೆ ಮುಖ್ಯ ಕಾರಣ ಶಾಸಕ ಹಿಟ್ನಾಳ ನಿಷ್ಕ್ರಿಯತೆ. ಶಾಸಕರಾಗಿ ಒಂದು ದಶಕ ಕಳೆದರೂ ಈ ಸಮಸ್ಯೆಗಳ ಬಗ್ಗೆ ಅವರು ಸದನದ ಗಮನ ಸೆಳೆದಿಲ್ಲ. ಪರಿಹಾರ ಹುಡುಕಿಲ್ಲ, ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸಿವಿಸಿ ಆರೋಪಿಸಿದ್ದಾರೆ.
ಖಾಸಗಿ ಕಾರ್ಖಾನೆ ವಿಸ್ತರಣೆ ವಿರುದ್ದ ಧರಣಿ 38 ದಿನ ದಾಟಿದೆ. ಹೋರಾಟಗಾರರ ಬೇಡಿಕೆ ನಿರ್ಲಕ್ಷ ವಹಿಸಿದ್ದಾರೆ. ಈ ಸಮಸ್ಯೆ ಪರಿಹರಿಸಿ ಎಂಬ ಗವಿಶ್ರೀ ಅವರ ಹಿತನುಡಿಗೆ ಶಾಸಕರ ಮೌನವೇ ಉತ್ತರವಾಗಿದೆ.
- ಸಿ. ವಿ. ಚಂದ್ರಶೇಖರ
ಸದನದಲ್ಲಿ ನೀವು ಕಾಣಿಸಿಕೊಂಡು ಮಾತನಾಡಿ ದಾಖಲೆ ನಿರ್ಮಿಸಿ. ಕ್ಷೇತ್ರದ ಸಮಸ್ಯೆಗಳನ್ನು ಹೇಗೆ ಪ್ರಸ್ತಾಪಿಸಬೇಕು ಎಂಬುದನ್ನು ನಿಮ್ಮ ಪಕ್ಷದ ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರನ್ನು ನೋಡಿ ಕಲಿಯಿರಿ.
ಪ್ರತಿ ಸಲ ಸದನ ಆಯೋಜನೆಗೊಳ್ಳುವ ಮೊದಲು ನೀವು ಮಾತನಾಡಬೇಕೆಂದು ಕ್ಷೇತ್ರದ ಜನ ಬಯಸುತ್ತಾರೆ. ಆದರೆ ಸದನದಲ್ಲಿ ನೀವು ಮಾತನಾಡಿದ್ದು ಯಾರೂ ಕೇಳಿಲ್ಲ, ನೋಡಿಲ್ಲ ಈ ಸಲವಾದರೂ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮಾತನಾಡಿ. ಇಲ್ಲವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿ ಎಂದು ಸಿವಿಸಿ ಒತ್ತಾಯಿಸಿದ್ದಾರೆ.