ಕೊಪ್ಪಳ ಇಲ್ಲಿಯವರೆಗೆ ಬೆಳೆದದ್ದು ಇಲ್ಲಿನವರ ಶ್ರಮದಿಂದ ಹೊರತು ಕಾರ್ಖಾನೆಗಳಿಂದ ಅಲ್ಲವೇ ಅಲ್ಲ. ಕೊಪ್ಪಳಕ್ಕೆ ಸಣ್ಣ ಗುಡಿ ಕೈಗಾರಿಕೆಗಳನ್ನು ತಂದರೆ ಒಳ್ಳೆಯದು ಹೊರತು ಈ ರೀತಿಯ ಕಾರ್ಖಾನೆಗಳಿಂದ ನಯಾಪೈಸೆ ಲಾಭವಿಲ್ಲ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಯನ್ಸ್ ಶ್ರೀನಿವಾಸ ಗುಪ್ತಾ ಅಭಿಪ್ರಾಯಪಟ್ಟರು.
ಅವರು ಕಾರ್ಖಾನೆಗಳ ವಿಸ್ತರಣೆ ವಿರುದ್ಧ ನಡೆಯುತ್ತಿರುವ 37ನೆ ದಿನದ ಧರಣಿಯಲ್ಲಿ ಲಯನ್ಸ್ ಕ್ಲಬ್ ಹಾಗೂ ಲಯನ್ಸ್ ಕ್ಲಬ್ ಸಂಸ್ಥೆಗಳ ಪದಾಧಿಕಾರಿಗಳು ಶಿಕ್ಷಕರು ವೈದ್ಯರ ಜೊತೆ ಶನಿವಾರ ಪಾಲ್ಗೊಂಡು ಮಾತನಾಡಿದರು.
ಭಾರತದಲ್ಲಿ ಮಾನವೀಯತೆಗೆ ಮೊದಲ ಆದ್ಯತೆ ಕೊಡಬೇಕು ಇಲ್ಲವಾದರೆ ಅಭಿವೃದ್ಧಿ ಹೆಸರಲ್ಲಿ ನಡೆಯುತ್ತಿರುವ ಹುಚ್ಚಾಟದಿಂದ ಅಭಿವೃದ್ಧಿ ಆಗಿ ನಾವೇ ಅಂಗವಿಕಲರಾದರೆ ಅಂತಹ ಅಭಿವೃದ್ಧಿಗೆ ಅರ್ಥವಿಲ್ಲ. ಕಾರ್ಖಾನೆ ವಿರುದ್ದ
ಹೋರಾಟಕ್ಕೆ ದೊಡ್ಡ ಪ್ರಮಾಣದಲ್ಲಿ ಬೆಂಬಲ ನೀಡಿ, ಹೆಚ್ಚಿನ ಜನರನ್ನು ಸೇರಿಸೋಣ, ಇಂಥ ಹೋರಾಟ ಅವಶ್ಯವಿದೆ ಎಂದರು.
" ನಮ್ಮ ಮುಂದಿನ ಪೀಳಿಗೆಗೆ ಗಾಳಿ ಕೊಡಿ ಎಂದು ಸರಕಾರವನ್ನು ಅಂಗಲಾಚುತ್ತಿದ್ದೇವೆ. ಪಂಚಭೂತಗಳ ಈ ನಮ್ಮ ಶರೀರ ಈಗ ಕೆಡುತ್ತಿದೆ. ಎಷ್ಟೇ ಕಷ್ಟ ಇರಲಿ ಒಂದು ಹೊತ್ತು ಊಟ ಬಿಡಿ, ರಜೆ ಹಾಕಿ ಬನ್ನಿ ಹೋರಾಡೋಣ "
- ವೆಂಕಟೇಶ ಶಾನಬಾಗ್ ನಿವೃತ್ತ ಅಧಿಕಾರಿ
ಲಯನ್ಸ್ ಕ್ಲಬ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಬಸವರಾಜ ಬಳ್ಳೊಳ್ಳಿ ಮಾತನಾಡಿ ಈಗಿರುವ ಕಾರ್ಖಾನೆಗಳ ಹೊಲಸು, ದೂಳು, ವಿಷಾನೀಲ ನಿಭಾಯಿಸಲು ಸಾಧ್ಯವಿಲ್ಲ. ಮುಂದೆ ಬರುವ ಆಧುನಿಕ ತಂತ್ರಜ್ಞಾನದಿಂದ ಮಾಲಿನ್ಯ ಆಗಲ್ಲ ಎನ್ನೊದು ಕೇವಲ ಕಣ್ಣೊರೆಸುವ ತಂತ್ರ. ಎಲ್ಲರೂ ಈ ಹೋರಾಟದಲ್ಲಿ ಭಾಗವಹಿಸಬೇಕು, ಇದು ಕೊಪ್ಪಳದ ಸರ್ವರ ಕರ್ತವ್ಯ ಎಂದರು.
ಪ್ರಮುಖರಾದ ಗವಿಸಿದ್ದಪ್ಪ ಮುದಗಲ್, ಶರಣು ಅಗಡಿ, SVEM ಶಾಲೆ ಮುಖ್ಯೋಪಾಧ್ಯಾಯಿನಿ ಪದ್ಮಜಾ, ಪರಮೇಶ್ವರಪ್ಪ ಕೊಪ್ಪಳ, ವಿಜ್ಞಾನ ಶಿಕ್ಷಕಿ ಬೀಬಿ ರೌಶನ್, ಸೇರಿದಂತೆ ಅನೇಕರು ಕಾರ್ಖಾನೆ ಮಾಲಿನ್ಯದ ಅಪಾಯದ ಬಗ್ಗೆ ಮಾತನಾಡಿದರು.
ಧರಣಿಯಲ್ಲಿ ಮಂಜುನಾಥ ಜಿ. ಗೊಂಡಬಾಳ, ಡಿ. ಎಂ. ಬಡಿಗೇರ, ಶರಣು ಗಡ್ಡಿ, ಪ್ರೊ. ಮನೋಹರ ದಾದ್ಮಿ, ಗುರುರಾಜ ಹಲಗೇರಿ, ಪಂಪಣ್ಣ ವಾರದ, ಸುಜಾತಾ ಹಲಗೇರಿ, ಜ್ಯೋತಿ ಅಗಡಿ, ಅಪರ್ಣ ಬಳ್ಳೊಳ್ಳಿ, ಸ್ಪೂರ್ತಿ ಮಾಗಿ, ಸಿ. ವಿ. ಜಡಿಯವರ, ಶಾಂತಯ್ಯ ಅಂಗಡಿ, ಮಹಾದೇವಪ್ಪ, ವಿ. ಬಿ. ಕಟ್ಟಿ, ವಿರೇಶ ಕೊಪ್ಪಳ,ಪದ್ಮನಗೌಡ ಪಾಟೀಲ್, ಮುದಕಪ್ಪ ಹೊಸಮನಿ, ಎಸ್. ಬಿ. ರಾಜೂರ, ಎಫ್.ಎಸ್.ಜಾಲಿಹಾಳ, ಟಿ. ಆರ್. ಬೆಲ್ಲದ, ಜಿ. ಬಿ. ಪಾಟೀಲ್, ಎಸ್. ಕೆ. ಸಿದ್ನೆಕೊಪ್ಪ, ಸ್ವಾಮಿ ವಿವೇಕಾನಂದ ಸಿಬಿಎಸ್ ಶಾಲೆ ಮುಖ್ಯೋಪಾಧ್ಯಾಯ ಮಂಜುನಾಥ ಕೆ. ಕಂಡಕಿ ಸೇರಿದಂತೆ 60 ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.