ಕೊಪ್ಪಳ: ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರಿಗೆ ಪದವೀಧರ ಪ್ರಾಥಮಿಕ (GPT) ಶಿಕ್ಷಕರ ಬೇಡಿಕೆಗಳನ್ನು ಸ್ಥಳೀಯ ಘಟಕದವರು ಮನವಿ ಮೂಲಕ ಸಲ್ಲಿಸಿದ್ದಾರೆ.
2016 ರಿಂದಲೂ ನಾಲ್ಕು ಹಂತಗಳಲ್ಲಿ ಪದವೀಧರ ಪ್ರಾಥಮಿಕ ಶಿಕ್ಷಕರನ್ನು ನೇಮಕ ಮಾಡಿ ರಾಜ್ಯದಲ್ಲಿ ಸುಮಾರು 24 ಸಾವಿರಕ್ಕೂ ಹೆಚ್ಚು GPT ಶಿಕ್ಷಕರನ್ನು ನೇಮಕ ಮಾಡಿರುವುದು ಸಂತೋಷದ ವಿಚಾರ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಮಾರುತಿ ಮ್ಯಾಗಳಮನಿ ಹೇಳಿದರು.
ಸಂಘದ ಬೈಲಾದಲ್ಲಿ GPT ಶಿಕ್ಷಕರಿಗಾಗಿ ಪ್ರತ್ಯೇಕ ನಿರ್ದೇಶಕ ಹುದ್ದೆಯನ್ನು ಸೃಷ್ಟಿಸುವ ಜೊತೆಗೆ, ನ್ಯಾಯಾಲಯದ ನಿರ್ದೇಶನದಂತೆ ಪದವೀಧರ ಪ್ರಾಥಮಿಕ ಶಿಕ್ಷಕರಿಗೆ ಪ್ರೌಢಶಾಲೆ ಮಟ್ಟಕ್ಕೆ ಬಡ್ತಿ ನೀಡುವಂತೆ ಅವರು ಆಗ್ರಹಿಸಿದರು.
ಹಳೇ ಪಿಂಚಣಿ ಯೋಜನೆಯನ್ನು ಮರುಜಾರಿಗೊಳಿಸುವುದು, ಹೊಸ (NPS) ಯೋಜನೆಯನ್ನು ಕೈಬಿಡುವುದು, BLO ಕರ್ತವ್ಯದಿಂದ ಶಿಕ್ಷಕರಿಗೆ ವಿನಾಯಿತಿ ನೀಡಿ ಶೈಕ್ಷಣಿಕ ಚಟುವಟಿಕೆಗಳ ಮೇಲುಸ್ತುವಾರಿ ನಿರ್ವಹಿಸಲು ಅವಕಾಶ ಕಲ್ಪಿಸುವುದು, ಶಿಕ್ಷಕರ ವರ್ಗಾವಣೆಯಲ್ಲಿ GPT ಆಂಗ್ಲ ಶಿಕ್ಷಕರ ಐದನೇ ಹುದ್ದೆಯ ಕಾರಣ ಉಂಟಾಗಿರುವ ಅನ್ಯಾಯ ಸರಿಪಡಿಸುವುದು, 2023ರಲ್ಲಿ ನೇಮಕಗೊಂಡ ಶಿಕ್ಷಕರ ಹಿಂದಿನ ಸೇವೆ ಪರಿಗಣಿಸಿ ವೇತನ ಸಂರಕ್ಷಣೆ ಕಲ್ಪಿಸುವುದು, CRP ಆಗುವವರಿಗೆ ಕಡ್ಡಾಯ 10 ವರ್ಷ ಸೇವೆ ಬದಲು 5 ವರ್ಷ ಸೇವೆ ಪರಿಗಣಿಸುವಂತೆ ನಿಯಮ ಬದಲಾವಣೆ ಮಾಡುವಂತೆ ಅವರು ಮನವಿ ಮಾಡಿದರು.
ಹಾಗೇ 2016ರಲ್ಲಿ ನೇಮಕಗೊಂಡ GPT ಶಿಕ್ಷಕರಿಗೆ ತಮ್ಮ ಪದವಿ/ಶಿಕ್ಷಣ ತರಬೇತಿ ಅವಧಿಯಲ್ಲಿ ಅಧ್ಯಯನ ಮಾಡಿದ ಐಚ್ಚಿಕ ವಿಷಯಕ್ಕೆ ಅನುಗುಣವಾಗಿ ವಿಷಯ ಬದಲಾವಣೆ ಅವಕಾಶ ನೀಡುವಂತೆ ಮನವಿಯಲ್ಲಿ ಕೇಳಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಕೋಶಾಧ್ಯಕ್ಷ ರಾಘವೇಂದ್ರ ಗೋನಾಳ, ಕೊಪ್ಪಳ ತಾಲೂಕು ಅಧ್ಯಕ್ಷ ಮಂಜುನಾಥ ಕೇಸಲಾಪುರ, ಕನಕಗಿರಿ ತಾಲೂಕು ಅಧ್ಯಕ್ಷ ಕನಕಪ್ಪ, ಕುಕನೂರು ತಾಲೂಕು ಅಧ್ಯಕ್ಷ ಪ್ರಭು, ನೌಕರರ ಸಂಘದ ನಿರ್ದೇಶಕರಾದ ಮಲ್ಲೇಶ್ ನಾಯಕ್, ಶರಣಪ್ಪ ಪತ್ತಾರ, ಸುಭಾನ್ ನದಾಫ್, ಪರಮೇಶ್ ಚಿಂತಾಮಣಿ, ಹಾಗೂ ಮೈಲಾರಪ್ಪ, ಪರಶುರಾಮ, ನಾಗರಾಜ್, ಭಾಸ್ಕರ್, ಶಶಿಧರ್ ಕುಂಬಾರ್ ಮುಂತಾದವರು ಉಪಸ್ಥಿತರಿದ್ದರು.