ಕೊಪ್ಪಳ: ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಹುದ್ದೆಯಿಂದ ಬೇಡಿಕೆ ಮೇರೆಗೆ ಬದಲಾಯಿಸುವ ಯಾವುದೇ ಪ್ರಯತ್ನ ನಡೆದರೆ, ರಾಜ್ಯದಾದ್ಯಂತ ಕಾಂಗ್ರೆಸ್ ವಿರುದ್ಧ ತೀವ್ರ ಪ್ರತಿಭಟನೆ ನಡೆಸುವುದಾಗಿ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಮುಖಂಡ ಟಿ. ರತ್ನಾಕರ್ ಎಚ್ಚರಿಸಿದ್ದಾರೆ.
ಶನಿವಾರ ಕೊಪ್ಪಳ ಮೀಡಿಯಾ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, “2023ರ ವಿಧಾನಸಭೆ ಚುನಾವಣೆಯಲ್ಲಿ ಅಹಿಂದ ವರ್ಗದ ಜನರು ಬಹುಮತದಲ್ಲಿ ಕಾಂಗ್ರೆಸ್ಗೆ ಮತಹಾಕಿದ ಕಾರಣವೇ ಪಕ್ಷ ಅಧಿಕಾರಕ್ಕೆ ಬಂದಿದೆ. ಆ ಮತದಾನದಿಂದಲೇ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾರೆ. ಸಿಎಂ ಆಗುವ ಸಮಯದಲ್ಲಿ 30 ತಿಂಗಳ ನಂತರ ಬದಲಾವಣೆ ಮಾಡುತ್ತೇವೆ ಎಂದು ಕಾಂಗ್ರೆಸ್ ಹೇಳಿರಲಿಲ್ಲ,” ಎಂದು ಹೇಳಿದರು.
ಮುಂದುವರಿದು, “ಸಿದ್ದರಾಮಯ್ಯ ಉತ್ತಮ ಆಡಳಿತ ನೀಡುತ್ತಿದ್ದಾರೆ. ಅವರನ್ನು ಬದಲಾಯಿಸಲು ಕಾಂಗ್ರೆಸ್ನ ಕೆಲ ಶಾಸಕರು ಮಾತ್ರ ಒತ್ತಾಯಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಸಿಎಂ ಸಿದ್ದರಾಮಯ್ಯರನ್ನು ಮಧ್ಯಾವಧಿಯಲ್ಲಿ ಬದಲಾಯಿಸಬಾರದು. ಅವರಿಗೆ ಪೂರ್ಣ ಐದು ವರ್ಷದ ಅವಧಿ ನೀಡಬೇಕು. ಆಗದಿದ್ದರೆ ರಾಜ್ಯಾದ್ಯಂತ ಕಾಂಗ್ರೆಸ್ ವಿರುದ್ಧ ಸಂಘಟಿತ ಪ್ರತಿಭಟನೆ ಖಚಿತ,” ಎಂದು ರತ್ನಾಕರ್ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕುಷ್ಟಗಿಯ ಸುಕ್ರಾಜ ತಾಳಕೇರಿ, ಕೊಪ್ಪಳದ ನಾಗರಾಜ ಚಲ್ಲೊಳ್ಳಿ, ಕನಕಗಿರಿಯ ಸಿದ್ದಪ್ಪ ನಿರಲೂಟಿ, ನಾಗಪ್ಪ ಹುಗ್ಗಿ, ಗಂಗಾವತಿಯ ಯಮನಪ್ಪ ವಿಠಲಾಪುರ, ಹನುಮಪ್ಪ ಹನುಮಾಪುರ, ಶಿವು ಯಲಬುರ್ಗಾ ಮತ್ತಿತರರು ಹಾಜರಿದ್ದರು.