ಕೊಪ್ಪಳ : 85 ವರ್ಷದ ಸಾಹಿತಿಗಳು ಬಂದ್ರು , 45 ವರ್ಷದ ಶಾಸಕರು ಇನ್ನೂ ಬಂದಿಲ್ಲ.
ಕಾರ್ಖಾನೆಗಳ ವಿಸ್ತರಣೆ ವಿರುದ್ದ ಕೊಪ್ಪಳದಲ್ಲಿ ನಡೆದಿರುವ ಅನಿರ್ದಿಷ್ಟ ಧರಣಿ ಇಂದು ನ. 24 ರಂದು 25 ನೆ ದಿನಕ್ಕೆ ಕಾಲಿಟ್ಟಿದೆ. ಧರಣಿಯಲ್ಲಿ ನಗರದ ವಿವಿಧ ಸಂಘಟನೆಗಳ ಜನ ಭಾಗವಹಿಸುತ್ತಿದ್ದಾರೆ. 2025 ಫೆ.24 ಕಾರ್ಖಾನೆಗಳ ವಿರುದ್ದ ಹೋರಾಟಕ್ಕೆ ಗವಿಶ್ರೀಗಳು ಆಗಮಿಸಿದ್ದರಿಂದ ಕಾರ್ಖಾನೆ ಮ್ಯಾಟ್ರು ರಾಜ್ಯದ ತುಂಬ ಸುದ್ದಿಯಾಗಿ ಗಮನ ಸೆಳೆದಿದೆ.
ಧರಣಿ ಆರಂಭವಾದ ಮೇಲೆ ರೈತ ಸಂಘದ ರಾಜ್ಯಾಧ್ಯಕ್ಷರು, ಗದಗನ ತೋಂಟದಾರ್ಯ ಸ್ವಾಮಿಜಿ, ಕಪ್ಪತ್ತಗುಡ್ಡದ ನಂದಿವೇರಿ ಮಠದ ಸ್ವಾಮಿಜಿ, ವಿಜಯಪುರ ಜಿಲ್ಲೆ ಇಟಗಿಯ ಗುರುಶಿವಶಾಂತವೀರ ಮಹಾಸ್ವಾಮಿಜಿ, ಸಾಮಾಜಿಕ ಹೋರಾಟಗಾರರ ಚಲನಚಿತ್ರ ನಟ ಚೇತನ್ ಸೇರಿದಂತೆ ನಾಡಿನ ಅನೇಕ ಗಣ್ಯರು, ಹೋರಾಟಗಾರರು, ಸಾಹಿತಿಗಳು ಆಗಮಿಸಿ ಧರಣಿಗೆ ಬೆಂಬಲ ಸೂಚಿಸಿದ್ದಾರೆ. ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.
ಧರಣಿ ಆರಂಭದ ಮರುದಿನವೆ ನ.1 ರಂದು ಧರಣಿ ಸ್ಥಳದ ಪಕ್ಕ ರಸ್ತೆಯಲ್ಲಿ ಸಂಚರಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಶಿವರಾಜ ತಂಗಡಗಿ ಧರಣಿಯತ್ತ ಹೊರಳಿ ನೋಡದೆ ಹಾಗೆ ಹೋಗಿದ್ದರು. ಅವರೂ ಸಹಿತ ಮೊನ್ನೆ ನ. 17 ರಂದು ಧರಣಿ ಸ್ಥಳಕ್ಕೆ ಬಂದು ಅಹವಾಲು ಕೇಳಿ, ಮತ್ತೊಮ್ಮೆ ಸಿಎಂ ಗಮನಕ್ಕೆ ತರುವ ಮಾತು ಹೇಳಿ ಹೋದರು. ಅವರ ಜೊತೆ ಸಂಸದರು ಬಂದು ಹೋದರು.
ಆದರೆ ಕ್ಷೇತ್ರದ ಶಾಸಕರು ರಾಘವೇಂದ್ರ ಹಿಟ್ನಾಳ ಮಾತ್ರ ಧರಣಿ ಆರಂಭವಾಗಿ 25 ದಿನವಾದರೂ ಧರಣಿ ಸ್ಥಳಕ್ಕೆ ಬಾರದೆ ಇರುವುದು ಜನರ, ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ.
ಶಾಸಕರು ಈಗಾಗಲೆ ವಿಕೇಂಡ್ ನಲ್ಲಿ ಅಥವಾ ಯಾವುದಾದರೂ ಕಾಮಗಾರಿ ಭೂಮಿ ಪೂಜೆ ಇದ್ದರೆ ಕ್ಷೇತ್ರಕ್ಕೆ ಬರ್ತಾರೆ ಎನ್ನೋದು ಜನಜನಿತವಾಗಿದೆ. ಆದರೆ ಬೇರೆ ದಿನಗಳಲ್ಲಿ ಕೊಪ್ಪಳಕ್ಕೆ ಬಂದಿದ್ದ ಶಾಸಕರು ಮದುವೆಗಳು, ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬೆಂಗಳೂರು ದಾರಿ ಹಿಡಿದಿದ್ದಾರೆ ಹೊರತು ಸೌಜನ್ಯಕ್ಕಾದರೂ ಧರಣಿ ಸ್ಥಳಕ್ಕೆ ಬಂದಿಲ್ಲ ಶಾಸಕರ ಈ ನಿಲುವು ಕಾರ್ಖಾನೆ ವಿಷಯದಲ್ಲಿ ಜನರ ಮನಸ್ಸಲ್ಲಿ ಆತಂಕ ಅನುಮಾನ ಮೂಡಿಸಿದೆ ಎಂಬ ಮಾತು ಕೇಳಿ ಬರುತ್ತಿದೆ.
ಧರಣಿಯ 25 ನೇ ದಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ 85 ವರ್ಷದ ಹಿರಿಯರು ಹೆಚ್. ಎಸ್. ಪಾಟೀಲರು ಧರಣಿಯಲ್ಲಿ ಭಾಗವಹಿಸಿದರು. ಧರಣಿಯ ವೇದಿಕೆಯಲ್ಲಿ ನಿಂತುಕೊಂಡು ಖಡಕ್ಕಾಗಿ ಮಾತನಾಡಿದರು. ಕೆಲವು ಜನಪ್ರತಿನಿಧಿಗಳು ಹಣದ ಬೆನ್ನು ಹತ್ತಿದ್ದಾರೆ. ಆರೋಗ್ಯ ಮುಖ್ಯವಲ್ಲ ಹಣ ಮುಖ್ಯವಾಗಿದೆ. ನಾವು ಆರೋಗ್ಯವಂತರಾಗಿ ಜೀವನ ನಡೆಸಿದವರು. ಈಗ ಎಂಥ ಸ್ಥಿತಿ ಬರುತ್ತಿದೆಯಲ್ಲ ಎಂದು ಖೇದ ವ್ಯಕ್ತಪಡಿಸಿ ಎಲ್ಲರೂ ಒಗ್ಗಟ್ಟಾಗಬೇಕು ಹೋರಾಟಕ್ಕೆ ಬೆಂಬಲಿಸಿ ಎಂದರು.
85 ವರ್ಷದ ಹಿರಿಯ ಸಾಹಿತಿಗಳು ಧರಣಿಗೆ ಬಂದ್ರು 45 ರ ಹರೆಯದ ಶಾಸಕರು ಯಾವಾಗ ಧರಣಿ ಸ್ಥಳಕ್ಕೆ ಬರ್ತಾರೆ ಎಂಬುದು ಈಗ ಎಲ್ಲರ ಪ್ರಶ್ನೆ.