ಕೊಪ್ಪಳ : ಸರಕಾರ ಗ್ಯಾರಂಟಿ ಕೊಡ್ತಾ ಇದೆ. ನಮಗೆ ಆ ಗ್ಯಾರಂಟಿಗಿಂತಲೂ ಶುದ್ದಗಾಳಿ ಗ್ಯಾರಂಟಿ ಬೇಕಾಗಿದೆ. ಶುದ್ದಗಾಳಿ ಉಳಿಬೇಕಾಗಿದೆ. ಶುದ್ದಗಾಳಿ ಮೂಲಕ ನಾವು ಉಳಿಯುವ ಸನ್ನಿವೇಶ ಸರಕಾರಗಳು ಸೃಷ್ಟಿ ಮಾಡಬೇಕು. ಸರಕಾರಗಳು ಜನರಿಗೆ ಏನು ಬೇಕು ಅದನ್ನು ಕೊಡ್ರಿ ಜನ ಯಾವುದು ಬೇಡ ಅಂತಾರೆ ಅದನ್ನ ಹಿಂದಕ ತಗೋರಿ ಆ ಮೂಲಕ ಜನಹಿತ ಸರಕಾರ ಅನ್ನೊ ಹೆಸರನ್ನ ಪಡೆಯಿರಿ ಎಂದು ಕಪ್ಪತ್ತಗುಡ್ಡದ ಶ್ರೀ ನಂದಿವೇರಿ ಮಹಾಸ್ವಾಮಿಗಳು ಹೇಳಿದರು.
ಅವರು ಕೊಪ್ಪಳ ಹತ್ತಿರ ಕಾರ್ಖಾನೆ ವಿಸ್ತರಣೆ ವಿರೋಧಿಸಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿಯಲ್ಲಿ ಮಾತನಾಡಿದರು. ಅದಕ್ಕೂ ಮುನ್ನ ಸ್ವಾಮಿಜಿಗಳು ಕಾರ್ಖಾನೆಗಳಿಂದ ಭಾದಿತ ಗ್ರಾಮಗಳಿಗೆ ಭೇಟಿ ನೀಡಿ ಜನರೊಂದಿಗೆ ಸಂವಾದ ಮಾಡಿದರು.
ನಾವು ಅಭಿವೃದ್ಧಿ ವಿರೋಧಿಗಳಲ್ಲ. ಕೊಪ್ಪಳ ಉಳಿಬೇಕು. ಕಾರ್ಖಾನೆಗಳಿಂದ ಪರಿಸರ ಹಾಳಾಗ್ತಿದೆ. ಜನ ಇಲ್ಲದಲ್ಲಿ ಕಾರ್ಖಾನೆ ಹಾಕಿ. ಇಲ್ಲಿ ಪರಿಸರ ಹಾಳಾಗಿ ಶರೀರ ಡಸ್ಟ್ ಬಿನ್ ಆಗಬಾರದು. ಇಲ್ಲಿ ಗಿಡಗಳ ಮೇಲೂ ಧೂಳು ಇದೆ.
ನಿಸರ್ಗವೆಂಬ ತಾಯಿಗೆ ಕಾರ್ಬನ್ ಎಂಬ ವಿಷ ಕೊಡಬಾರದು. ಬಂಗಾರದ ಗಣಿಗಾರಿಕೆಗೆ ಬಂಡವಾಳಶಾಹಿಗಳು ಕಪ್ಪತ್ತಗುಡ್ಡಕ್ಕೆ ಬಂದಿದ್ರು. ಜನ ಒಗ್ಗಟ್ಠಾಗಿ ಹೋರಾಡಿ ವಾಪಸ್ ಕಳಿಸಿದ್ದೇವೆ. ಇಲ್ಲಿಯೂ ಕೂಡ ಜಿಲ್ಲೆಯ ಜನ ಎದ್ದು ನಿಲ್ಲಬೇಕು ಹೋರಾಟಕ್ಕೆ ಸಿದ್ದರಾಗಿ ಎಂದ ಅವರು ಗಿಡಗಳ ಬಗ್ಗೆ ಪಾಶ್ಷಿಮಾತ್ಯ ಸಾಹಿತಿಯೊಬ್ಬರು ಬರೆದ ಕನ್ನಡ ಕವಿ ಬಿ.ಎಂ.ಶ್ರೀ ಅವರು ಅನುವಾದಿಸಿದ ಕವನ ಹಾಗೂ ಚೆನ್ನವೀರ ಕಣವಿಯವರ ಕವನ ಹೇಳಿದರು.
ಈ ಸಂದರ್ಭದಲ್ಲಿ ಅಲ್ಲಮಪ್ರಭು ಬೆಟ್ಟದೂರು, ಡಿ.ಹೆಚ್.ಪೂಜಾರ, ಕೆ.ಬಿ.ಗೋನಾಳ, ಬಸವರಾಜ ಶೀಲವಂತರ, ಮಂಜುನಾಥ ಗೊಂಡಬಾಳ, ಡಿ.ಎಂ. ಬಡಿಗೇರ ಇತರರು ಉಪಸ್ಥಿತರಿದ್ದರು.