ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳರ ಪ್ರೇರಣಾ ಸಂಸ್ಥೆ ಮೂಲಕವೆ ಕಂಕರ್ ಖರೀದಿಸುವ ವ್ಯವಸ್ಥೆ ವಿರೋಧಿಸಿ ನ. 12 ಬುಧವಾರದಂದು ಗುತ್ತಿಗೆದಾರರ ಸಂಘ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಗೆ ಕಟ್ಟಡ ಕಾರ್ಮಿಕರ ಸಂಘ ಹಾಗೂ ಟಿಪ್ಪರ್ ಮಾಲೀಕರು ಬೆಂಬಲ ಸೂಚಿಸಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಜಿಲ್ಲೆಯಲ್ಲಿ ಕಂಕರ್ ಬೇಕಾದರೆ ಸಂಸದ ರಾಜಶೇಖರ ಹಿಟ್ನಾಳ ತಮ್ಮದೆ ಪ್ರೇರಣಾ ಸಂಸ್ಥೆಗೆ ಅಡ್ವಾನ್ಸ್ ಹಣ ಕೊಟ್ಟು ಖರಿದೀಸುವ ವ್ಯವಸ್ಥೆ ಮಾಡಿದ್ದಾರೆ. ಇದು ರಾಜಶೇಖರ ಹಿಟ್ನಾಳ ಕ್ರಷರ್ ಉದ್ಯಮ ಹಿಡಿತಕ್ಕೆ ತೆಗೆದುಕೊಳ್ಳುವ ಹುನ್ನಾರ ಎಂದು ಗುತ್ತಿಗೆದಾರರ ಸಂಘ ಆರೋಪಿಸಿತ್ತು.
ನಂತರ ಶಾಸಕ ರಾಘವೇಂದ್ರ ಹಿಟ್ನಾಳ ಸಭೆ ನಡೆಸಿ ಗುತ್ತಿಗೆದಾರರು , ಸಾರ್ವಜನಿಕರು ಯಾವುದೇ ಕ್ರಷರ್ ನಿಂದ ನೇರ ಕಂಕರ್ ಖರೀದಿಸಬಹುದು ಎಂದು ನಿರ್ಣಯ ಹೇಳಿದ್ದರು.
ಆದರೆ ಕ್ರಷರ್ ಮಾಲೀಕರು ಮಾತ್ರ ಯಾರಿಗೆ ಕಂಕರ್ ಬೇಕಾದ್ರೂ ರಾಜಶೇಖರ ಹಿಟ್ನಾಳರ ಪ್ರೇರಣಾ ಮೂಲಕವೆ ಖರೀದಿಸಿ ಎನ್ನುತ್ತಿದ್ದಾರೆ.
ಈ ಮುಂಚೆ ಘೋಷಿಸಿದಂತೆ ಗುತ್ತಿಗೆದಾರರ ಸಂಘ ನಾಳೆ ನ. 12 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ಈ ಪ್ರತಿಭಟನೆಗೆ ಬೆಂಬಲ ಸೂಚಿಸಿರುವ ಕಟ್ಟಡ ಕಾರ್ಮಿಕರ ಸಂಘ ಮೊದಲು ನೇರ ಕ್ರಷರ್ ಗಳಿಂದ ಕಂಕರ್ ಖರೀದಿ ಚೆನ್ನಾಗಿತ್ತು. ಈಗ ಪ್ರೇರಣಾದಿಂದ ಕಂಕರ್ ಖರೀದಿಸಿದರೆ ಪ್ರೇರಣಾದ ಕಮಿಷನ್ ಸೇರಿ ದುಬಾರಿಯಾಗುತ್ತದೆ ಇದು ಮನೆ ಕಟ್ಟುವವರಿಗೆ ತೊಂದರೆ ಎಂದಿದ್ದಾರೆ.
ಅದೆ ರೀತಿ ನಾಗೇಶನಹಳ್ಳಿ , ಬಿಳೆಬಾವಿ, ಬೂದಗುಂಪಾ, ಕೆರೆಹಳ್ಳಿ , ಅಗಳಕೇರಿ ಭಾಗದ ಟಿಪ್ಪರ್ ಮಾಲೀಕರೂ ಕೂಡ ಗುತ್ತಿಗೆದಾರರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ಎಷ್ಟೋ ಕ್ರಷರ್ ಗಳಿಗೆ ನಮ್ಮ ಪೂರ್ವಜರು ಭೂಮಿ ನೀಡಿದ್ದಾರೆ. ಕ್ರಷರ್ ಗಳಿಂದ ರಸ್ತೆ ಹಾಳಾಗುತ್ತಿದ್ದರೂ ಟಿಪ್ಪರ್ ಗೆ 500 ರೂಪಾಯಿ ದುಡಿಯುತ್ತಿದ್ದೇವು. ಈಗ ಕ್ರಷರ್ ಮಾಲೀಕರು ಪ್ರೇರಣಾ ಸಂಸ್ಥೆ ಮೂಲಕ ನಮ್ಮನ್ನು ಆಟವಾಡಿಸುತ್ತಿದ್ದಾರೆ. ನಮ್ಮ ದುಡಿಮೆಗೆ ತೊಂದರೆ ಮಾಡುತ್ತಿದ್ದಾರೆ.
ಕಾರಣ ಕ್ರಷರ್ ಮಾಲೀಕರು ಪ್ರೇರಣಾ ಸಂಸ್ಥೆಯಿಂದ ಹೊರಬಂದು ಟಿಪ್ಪರ್ ಮಾಲೀಕರನ್ನು ವಿಶ್ವಾಸಕ್ಕೆ ಪಡೆದು ಮೊದಲಿನಂತೆ ವ್ಯಾಪಾರ ವಹಿವಾಟು ನಡೆಸಲು ಸೂಕ್ತ ಮಾರ್ಗದರ್ಶನ ನೀಡಲು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಿದ್ದಾರೆ.
ನ. 12 ರ ಪ್ರತಿಭಟನೆ ಇದು ಸಂಸದರಿಗೆ ಹಾಗೂ ಕ್ರಷರ್ ಮಾಲೀಕರಿಗೆ ಮೊದಲ ಹಿನ್ನಡೆ ಎನ್ನಬಹುದು. ಇನ್ನು ನಾಳೆ ಪ್ರತಿಭಟನೆ ಮುಕ್ತಾಯ ಹೊತ್ತಿಗೆ ಬೇಡಿಕೆ ಈಡೇರದಿದ್ದರೆ ನಾಡಿದ್ದು ನ. 13 ರಿಂದ ಸರಕಾರಿ ಟೆಂಡರ್ ಕಾಮಗಾರಿಗಳನ್ನು ಬಂದ್ ಮಾಡುವುದಾಗಿ ಗುತ್ತಿಗೆದಾರರು ಹೇಳಿದ್ದಾರೆ. ಹಾಗಾಗಿ ಬಿಟ್ಟರೆ ಅದರ ಎಫೆಕ್ಟ್ ನೇರ ಶಾಸಕರಿಗೂ ತಟ್ಟಲಿದೆ. ಏಕೆಂದರೆ ಕ್ರಷರ್ ಗಳ ಮೇಲೆ ಪ್ರೇರಣಾ ಸಂಸ್ಥೆ ಹಿಡಿತ ತಪ್ಪಬೇಕು ಎನ್ನುವುದು ರಾಜಶೇಖರ ಹಿಟ್ನಾಳರಿಗೆ ಸಂಬಂಧಿಸಿದ್ದರೆ, ಪ್ಯಾಕೇಜ್ ಟೆಂಡರ್ ಕೈ ಬಿಡಬೇಕು, KRIDL ಮತ್ತು ನಿರ್ಮಿತಿಗೆ ಕಾಮಗಾರಿ ನೀಡುವುದು ಕಡಿಮೆ ಮಾಡಬೇಕು ಎಂಬ ಬೇಡಿಕೆ ಶಾಸಕ ರಾಘವೇಂದ್ರ ಹಿಟ್ನಾಳರಿಗೆ ಸೇರಿದೆ.
ಶಾಸಕ ರಾಘವೇಂದ್ರ ಹಿಟ್ನಾಳ ಈ ವಾರ ಅಳವಂಡಿ ಭಾಗದಲ್ಲಿ ಅನೇಕ ಕಾಮಗಾರಿಗಳ ಭೂಮಿ ಪೂಜೆ ಮಾಡಿದ್ದು ಬಹುತೇಕ ಕಾಮಗಾರಿ KRIDL ಮತ್ತು ನಿರ್ಮಿತಿ ಕೇಂದ್ರಕ್ಕೆ ನೀಡಿದ್ದಾರೆ.