ಕೊಪ್ಪಳ ಜನರ ಪರವಾಗಿ ಜನಪ್ರತಿನಿಧಿಗಳನ್ನು ತಮ್ಮಲ್ಲಿಗೆ ಕರೆಯಿಸಿಕೊಂಡು ಕಾರ್ಖಾನೆ ವಿಸ್ತರಣೆ ರದ್ದುಗೊಳಿಸುವ ಆದೇಶ ತರಲು ಮತ್ತೊಮ್ಮೆ ಆಜ್ಞೆ ಮಾಡಬೇಕು. ಆದೇಶ ತರದಿದ್ದರೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಸಿದರೆ ಎಲ್ಲ ಸರಿ ಆಗುತ್ತದೆ.
ಹೀಗೆ ಪತ್ರ ಬರೆದದ್ದು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಸ್ವಾಮಿಜಿಯವರಿಗೆ. ಬರೆದವರು ಕಾರ್ಖಾನೆ ವಿರುದ್ದ ಅನಿರ್ದಿಷ್ಟ ಧರಣಿ ಆರಂಭಿಸಿರುವ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ.
ಈ ಪತ್ರವನ್ನು ಇಂದು ಶುಕ್ರವಾರ ಸಂಜೆ ಹೋರಾಟಗಾರರು ಶ್ರೀ ಗವಿಮಠಕ್ಕೆ ತಲುಪಿಸಿದ್ದಾರೆ. ಶ್ರೀಗಳು ಮೌನ ಅನುಷ್ಠಾನದಲ್ಲಿದ್ದಾರೆ. ಹಾಗಾಗಿ ಮಠದ ಕಚೇರಿಗೆ ಪತ್ರ ತಲುಪಿಸಿದ್ದಾರೆ.
ಪತ್ರದಲ್ಲಿ ಶ್ರೀಗಳಿಗೆ ಮಾಡಿರುವ ಮನವಿ ಮಠದ ಭಕ್ತರು ಹೋರಾಟ ಸಮಿತಿಗೆ ತಿಳಿಸಿದ್ದು ಅದನ್ನ ಪತ್ರ ರೂಪದಲ್ಲಿ ಸ್ವಾಮಿಜಿಯವರಿಗೆ ತಲುಪಿಸಿದ್ದಾರೆ.
ಫೆ. 24 ರಂದು ಸಾವಿರಾರು ಜನರ ಸಮ್ಮುಖದಲ್ಲಿ ( ರಾಘವೇಂದ್ರ ಹಿಟ್ನಾಳ ಬಸವರಾಜ ರಾಯರಡ್ಡಿ ಶಿವರಾಜ ತಂಗಡಗಿ) ಮೂವರು ಜನಪ್ರತಿನಿಧಿಗಳಿಗೆ BSPL ವಿಸ್ತರಣೆ ನಿಲ್ಲಿಸುವಂತೆ ಸರಕಾರದ ಆದೇಶ ತರುವಂತೆ ಹೇಳಿದ್ದೀರಿ ಒಪ್ಪಿಕೊಂಡ ಜನಪ್ರತಿನಿಧಿಗಳು ಈ ಕೆಲಸ ಮಾಡಿಲ್ಲ ಎಂದು ಪತ್ರದಲ್ಲಿ ಮತ್ತೊಮ್ಮೆ ಪ್ರಸ್ತಾಪಿಸಿದ್ದಾರೆ ಸಮಿತಿಯವರು.
ಈ ಪತ್ರಕ್ಕೆ ಅಲ್ಲಮಪ್ರಭು ಬೆಟ್ಟದೂರು, ಮ.ಬ.ಗೋನಾಳ, ಮಹಾದೇವಪ್ಪ, ಯಲ್ಲಪ್ಪ , ಬಸವರಾಜ, ದುರುಗಪ್ಪ , ಎಸ್.ಬಿ.ರಾಜೂರು, ಇತರರು ಸಹಿ ಮಾಡಿದ್ದಾರೆ.
ಸಂಜೆ ಮಠದ ಕಚೇರಿಗೆ ಪತ್ರವನ್ನು ಅಲ್ಲಮಪ್ರಭು ಬೆಟ್ಟದೂರು ನೇತೃತ್ವದಲ್ಲಿ ತಲುಪಿಸಿದ್ದಾರೆ. ಸ್ವಾಮಿಜಿಯವರು ಈ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ಬಗ್ಗೆ ಜನ ಕಾಯುತ್ತಿದ್ದಾರೆ.