ಕೊಪ್ಪಳ : ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಶೈಕ್ಷಣಿಕ ಚಟುವಟಿಕೆಗಳ ಸ್ಥಿತಿಗತಿ ಪರಿಶೀಲನೆ ಕುರಿತು ಶಾಲಾ ಶಿಕ್ಷಣ ಇಲಾಖೆ ಹಾಗೂ ಡಿ.ಎಸ್.ಇ.ಅರ್.ಟಿ. ಜಂಟಿಯಾಗಿ ಹೊರಡಿಸಿರುವ ಸುತ್ತೋಲೆ ಅವೈಜ್ಞಾನಿಕವಾಗಿದೆ ಎಂದು ಕೊಪ್ಪಳ ಜಿಲ್ಲೆಯ ಪಿಯು ಕಾಲೇಜುಗಳ ಉಪನ್ಯಾಸಕ ಮತ್ತು ಪ್ರಾಚಾರ್ಯರ ಸಂಘಗಳು ಆರೋಪಿಸಿವೆ.
“ಕಾಲೇಜುಗಳ ಶೈಕ್ಷಣಿಕ ಮತ್ತು ಇತರೆ ಸೌಲಭ್ಯಗಳ ಪರಿಶೀಲನೆಗೆ ನಮ್ಮದು ವಿರೋಧವಿಲ್ಲ. ಆದರೆ ಇಲಾಖೆಗೆ ಸಂಬಂಧಿಸದ ಡಯಟ್ ಅಧಿಕಾರಿಗಳು ಹಾಗೂ ಉಪನ್ಯಾಸಕರು ಪರಿಶೀಲನೆ ನಡೆಸುವುದು ತರವಲ್ಲ,” ಎಂದು ಅವರು ಸ್ಪಷ್ಟಪಡಿಸಿದರು.
ಈ ಸುತ್ತೋಲೆಯಿಂದ ನೌಕರರಲ್ಲಿ ಅಭದ್ರತೆ ಉಂಟಾಗಿದೆ. ಆದ್ದರಿಂದ ಇದನ್ನು ಕೂಡಲೇ ಹಿಂತೆಗೆದುಕೊಳ್ಳಬೇಕೆಂದು ಜಿಲ್ಲಾ ಉಪನಿರ್ದೇಶಕ ಜಿ.ಎಚ್. ಜಗದೀಶ ಅವರ ಮುಖಾಂತರ ಇಲಾಖೆಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಚಾರ್ಯರ ಸಂಘದ ಅಧ್ಯಕ್ಷ ಬಸಪ್ಪ ನಾಗೋಲಿ, ಕಾರ್ಯದರ್ಶಿ ಬಸವರಾಜ, ಕಜಾಂಚಿ ಟಿ.ಸಿ. ಶಾಂತಪ್ಪ, ಉಪನ್ಯಾಸಕರ ಸಂಘದ ಅಧ್ಯಕ್ಷ ಸೋಮಶೇಖರಗೌಡ, ಕಾರ್ಯಾಧ್ಯಕ್ಷ ಮಾರುತಿ ಲಕಮಾಪುರ, ಹಿರಿಯ ಪ್ರಾಚಾರ್ಯರು ರಾಜಶೇಖರ ಪಾಟೀಲ್, ಶಿವಾನಂದ, ಮಂಜುನಾಥ ಸ್ವಾಮಿ, ಉಪನ್ಯಾಸಕರು ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್, ರಾಚಪ್ಪ ಕೇಸರಬಾವಿ, ಕೆ.ಎಸ್. ಹುಲಿ, ಎಸ್.ವಿ. ಮೇಳಿ, ಕೆ.ಎಚ್. ಕೊಳ್ಳಣ್ಣನವರ್, ಶಿವಾನಂದ ಮೇಟಿ, ಲಲಿತಮ್ಮಾ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಪದಾಧಿಕಾರಿಗಳು ಹಾಜರಿದ್ದರು.