ಕೊಪ್ಪಳ : ನಾಡಕವಿ ಎಂದೇ ಖ್ಯಾತರಾಗಿದ್ದ ಗವಿಸಿದ್ದ ಎನ್ ಬಳ್ಳಾರಿಯವರ ಸ್ಮರಣಾರ್ಥ ನೀಡಲಾಗುತ್ತಿರುವ ಕಾವ್ಯ ಪ್ರಶಸ್ತಿ ನಾಡಿನ ಎಲ್ಲೆಡೆ ಗಮನ ಸೆಳೆದಿದೆ.
ಈ ಬಾರಿಯ 'ಗವಿಸಿದ್ಧ ಎನ್. ಬಳ್ಳಾರಿ - ಕಾವ್ಯ ಪ್ರಶಸ್ತಿ - 2022' - ಪ್ರಕಟವಾಗಿದ್ದು ರಾಜ್ಯಮಟ್ಟದಲ್ಲಿ ಪ್ರತಿ ವರ್ಷ ಕಾವ್ಯದ ಹಸ್ತಪ್ರತಿಗೆ ಕೊಡಮಾಡುವ
'ಗವಿಸಿದ್ಧ ಎನ್. ಬಳ್ಳಾರಿ - ಕಾವ್ಯ ಪ್ರಶಸ್ತಿ' ಗೆ ದಾವಣಗೆರೆಯ ಡಾ. ಮಹಾಂತೇಶ ಪಾಟೀಲ್ ರ
'ಚಲಿಸುವ ಮೋಡಗಳು' ಮತ್ತು ಮಮತಾ ಅರಸೀಕೆರೆಯವರ 'ನೀರ ಮೇಲಿನ ಮುಳ್ಳು' ಹಸ್ತಪ್ರತಿಗಳಿಗೆ ಲಭಿಸಿದೆ.
ಈ ವರ್ಷ ಒಟ್ಟು 61 ಹಸ್ತಪ್ರತಿಗಳು ಬಂದಿದ್ದವು. ಇವುಗಳಲ್ಲಿ - 10 ಹಸ್ತಪ್ರತಿಗಳು ಸೆಮಿಫೈನಲ್ ಸುತ್ತಿಗೆ ಮತ್ತು ನಂತರ 5 ಹಸ್ತಪ್ರತಿಗಳು ಕೊನೆಯ ಸುತ್ತಿಗೆ ಆಯ್ಕೆಯಾಗಿದ್ದವು.
ಹಿರಿಯ ಬಂಡಾಯ ಕವಿಗಳು, ಹೋರಾಟಗಾರರಾದ ಅಲ್ಲಮಪ್ರಭು ಬೆಟ್ಟದೂರ ಮತ್ತು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಿರಿಯ ಸಾಹಿತಿಗಳಾದ ಎಚ್.ಎಸ್. ಪಾಟೀಲರು ಕೊನೆಯ ಸುತ್ತಿನ ತೀರ್ಪುಗಾರರಾಗಿದ್ದರು.
ಪ್ರಶಸ್ತಿಯು ತಲಾ ಆರು ಸಾವಿರ ರೂಪಾಯಿ ನಗದು ಮತ್ತು ಫಲಕವನ್ನು ಒಳಗೊಂಡಿದೆ.
ಪ್ರಶಸ್ತಿಯನ್ನು ಕೊಪ್ಪಳದಲ್ಲಿ ಅಕ್ಟೋಬರ್ 16, 2022 ರಂದು ನಡೆಯುವ 'ಗವಿಸಿದ್ಧ ಎನ್. ಬಳ್ಳಾರಿ - ಸಾಹಿತ್ಯೋತ್ಸವ'ದಲ್ಲಿ ವಿತರಿಸಲಾಗುವುದು ಎಂದು 'ಗವಿಸಿದ್ಧ ಎನ್. ಬಳ್ಳಾರಿ ವೇದಿಕೆ'ಯ ಪರವಾಗಿ ಮಹೇಶ ಬಳ್ಳಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.