ಕೊಪ್ಪಳ : ಗಂಗಾವತಿ ತಾಲೂಕಿನ 15 ಹಳ್ಳಿಗಳನ್ನು ಹಂಪಿ ಪ್ರಾಧಿಕಾರ ( Hampi world heritage area management authority) ವ್ಯಾಪ್ತಿಯಿಂದ ಮುಕ್ತಗೊಳಿಸುವಂತೆ ಆನೆಗೊಂದಿ ಭಾಗದ ಜನ ಮುಖಂಡರು ಇಂದು ಕೊಪ್ಪಳದಲ್ಲಿ ಪ್ರತಿಭಟಿಸಿದರು.
ಬಸವೇಶ್ವರ ವೃತ್ತದಿಂದ ಜಿಲ್ಲಾಡಳಿತ ಭವನಕ್ಕೆ ತೆರಳಿ ಮನವಿ ಸಲ್ಲಿಸಿದರು.
ನಮ್ಮ ಹಳ್ಳಿಗಳು ಹಂಪಿ ಪ್ರಾಧಿಕಾರ ವ್ಯಾಪ್ತಿಗೆ ಸೇರಿದ ನಂತರ ಯಾವುದೇ ಪರವಾನಗಿ, ಸೌಲಭ್ಯ, ವಿಶೇಷವಾಗಿ ನಿವೇಶನ, ಹಕ್ಕುಪತ್ರ, ಕಟ್ಟಡ ಅನುಮತಿ, ಕರೆಂಟ್ ಸಂಪರ್ಕ ಅನುಮತಿ ಸಿಗುತ್ತಿಲ್ಲ.
ಈ ಕಾರಣದಿಂದ ಪ್ರವಾಸಿಗರಿಗೆ ಕುಡಿಯುವ ನೀರು, ಶೌಚಾಲಯ, ಆಸ್ಪತ್ರೆ ಕಲ್ಪಿಸಲು ಆಗುತ್ತಿಲ್ಲ. ಪ್ರಾಧಿಕಾರದಿಂದ ಅಭಿವೃದ್ಧಿ ಕಾರ್ಯ ಆಗದೆ ಅದರ ನಿಯಮಗಳಿಂದ ಜನಜೀವನಕ್ಕೆ ತೊಂದರೆಯಾಗುತ್ತಿದೆ. ನಮಗೆ ಪ್ರಾಧಿಕಾರದಿಂದ ಮುಕ್ತಿ ಕೊಡಿ ಎಂದು ಆಗ್ರಹಿಸಿದರು.
ಜೊತೆಗೆ ಹಂಪಿಯ ವಿಠಲ ದೇವಸ್ಥಾನದಿಂದ ಆನೆಗೊಂದಿ, ಅಂಜನಾದ್ರಿಯಿಂದ ಹಂಪಿ ರಾಮಮಂದಿರ, ವಿರುಪಾಪುರ ಗಡ್ಡಿಯಿಂದ ಹಂಪಿ ವಿರುಪಾಕ್ಷ ದೇವಸ್ಥಾನವರೆಗೆ ಒಟ್ಟು ಮೂರು ಕಡೆ ಪಾದಚಾರಿ ಸೇತುವೆ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಲಲಿತಾರಾಣಿ ಶ್ರೀರಂಗದೇವರಾಯಲು, ಶ್ರೀಕೃಷ್ಣದೇವರಾಯ, ಡಾ. ಕೆ.ವಿ.ಬಾಬು, ಸಾಯಿಕುಮಾರ ವಕೀಲರು, ವಿಷ್ಣು ಜೋಷಿ, ಮಲ್ಲಿಕಾರ್ಜುನ, ಹೊನ್ನಪ್ಪ , ಶ್ರೀನಾಥ, ಪ್ರಶಾಂತ ಇತರರು ಭಾಗವಹಿಸಿದ್ದರು.