ಕೊಪ್ಪಳ : ಗ್ಯಾರಂಟಿಗಳಿಗೆ ಹಣ ಹೊಂದಿಸಲು ರಾಜ್ಯ ಸರಕಾರ ತಿಪ್ಪರಲಾಗ ಹಾಕುತ್ತಿದೆಯಾ ? ಇಂಥ ಅನುಮಾನದ ನಡುವೆ ರಾಜ್ಯದಲ್ಲಿ ಮದ್ಯಪಾನ ನಿಷೇಧ ಅಪ್ರಪಸ್ತುತ ಎಂದು ಕಾನೂನು ಸಚಿವರಾದ ಹೆಚ್.ಕೆ.ಪಾಟೀಲರು ಹೇಳಿದ್ದು ಈ ಮಾತನ್ನು AIDYO ಖಂಡಿಸಿದೆ.
ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶರಣು ಪಾಟೀಲ್ ಪ್ರಕಟಣೆ ನೀಡಿ - ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ 'ಸಂಯಮ ಪ್ರಶಸ್ತಿ' ಪ್ರದಾನ ಸಮಾರಂಭದಲ್ಲಿ ಹೆಚ್. ಕೆ. ಪಾಟೀಲರು - ಮದ್ಯ ಮಾರಾಟದಿಂದ ರಾಜ್ಯಕ್ಕೆ ವರ್ಷಕ್ಕೆ 40 ಸಾವಿರ ಕೋಟಿ ಆದಾಯವಿದೆ.
ಮದ್ಯಪಾನಕ್ಕಿಂತಲೂ ಗಾಂಜಾ, ಅಫೀಮು, ಡ್ರಗ್ ಸೇವನೆಯಿಂದ ತರುಣರು ಹೆಚ್ಚಿನ ಸಂಖ್ಯೆಯಲ್ಲಿ ಮೃತಪಡುತ್ತಿದ್ದಾರೆ. ಮದ್ಯಪಾನ ಮಾಡುತ್ತ 60-65 ವರ್ಷದವರೆಗೂ ಬದುಕಬಹುದು ಎಂದು ಸಚಿವರು ಮದ್ಯಪಾನ ಪರ ವಹಿಸಿದ್ದು ಯುವಜನತೆಗೆ ತಪ್ಪು ಸಂದೇಶ ನೀಡುತ್ತದೆ.
ಕೃಷಿ - ಕೂಲಿ ಕಾರ್ಮಿಕರ ಮದ್ಯದ ವ್ಯಸನದಿಂದ ಕುಟುಂಬಗಳು ಬೀದಿಗೆ ಬರುತ್ತಿವೆ. ರಾಜ್ಯ ಸರ್ಕಾರ ಆದಾಯಕ್ಕಾಗಿ ಜನರ ಜೀವನ ಪಣಕ್ಕಿಡುವುದು ನಾಚಿಕೆಗೇಡಿನ ಸಂಗತಿ. ನಿಜವಾದ ಅಭಿವೃದ್ಧಿ ಎಂದರೆ ಜನರ ಆರೋಗ್ಯ, ಶಿಕ್ಷಣ ಮತ್ತು ಭವಿಷ್ಯ ಕಾಪಾಡುವುದೇ ಹೊರತು ವ್ಯಸನಗಳನ್ನು ಪ್ರೋತ್ಸಾಹಿಸುವುದಲ್ಲ. ಸಚಿವರು ಕೂಡಲೇ ತಮ್ಮ ಹೇಳಿಕೆ ವಾಪಸ್ ಪಡೆದು ಮದಪಾನ ನಿಷೇಧ ಮಾಡಬೇಕು ಎಂದು ಶರಣು ಪಾಟೀಲ್ ಆಗ್ರಹಿಸಿದ್ದಾರೆ.