ಕೊಪ್ಪಳ : ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇನ್ನೂ 12ನೇ ದಿನಕ್ಕೆ ಅವರು ದಾಂಪತ್ಯ ಬದುಕಿಗೆ ಕಾಲಿಡುತ್ತಿದ್ದರು. ಆದರೆ ಲಾರಿಯೊಂದು ಬಂದು ಮದುವೆಯಾಗಬೇಕಿದ್ದ ಈ ಜೋಡಿ ತೆಗೆದುಕೊಂಡು ಬಿಟ್ಟಿದೆ. ಕೂಡಿ ಬಾಳಬೇಕಿದ್ದ ಜೋಡಿ ಕೂಡಿ ಪ್ರಾಣಬಿಟ್ಟರು. ಮನಕಲುಕುವ ಈ ದುರ್ಘಟನೆ ಗಂಗಾವತಿಯ ಚಿಕ್ಕಬೆಣಕಲ್ ಹತ್ತಿರ ನಿನ್ನೆ ರಾತ್ರಿ 9ರ ಸುಮಾರಿಗೆ ನಡೆದಿದೆ.
ಈ ದುರ್ಘಟನೆ ಪ್ರಿವೆಡ್ಡಿಂಗ್ ಶೂಟ್ ಮುಗಿಸಿಕೊಂಡು ಬರುವಾಗ ನಡೆದಿದೆ. ಕೊಪ್ಪಳ ತಾಲೂಕು ಹನುಮನ ಹಟ್ಟಿ ( ಇರಕಲ್ಲಗಡ ಹತ್ತಿರ) ಗ್ರಾಮದ ಕರಿಯಪ್ಪ (26) ಹಾಗೂ ಕಾರಟಗಿ ತಾಲೂಕು ಮುಷ್ಟೂರಿನ ಕವಿತಾ ಅಪಘಾತದಲ್ಲಿ ಮೃತಪಟ್ಟವರು.
ಹನುಮನಟ್ಟಿಯ ಹೊಳೆಯಪ್ಪ ಮಡಿವಾಳರ್ ಅವರ ಪುತ್ರ ಕರಿಯಪ್ಪ , ಮುಷ್ಟೂರಿನ ಪವಾಡೆಪ್ಪ ಅವರ ಪುತ್ರಿ ಕವಿತಾ ಇವರ ಮದುವೆಯು ಹನುಮನಹಟ್ಟಿಯಲ್ಲಿ ಇದೇ ಡಿಸೆಂಬರ್ 20 ರಂದು ಗ್ರಾಮದ ಮಾರುತೇಶ್ವರ - ಬಸವೇಶ್ವರ ಕಾರ್ತಿಕೋತ್ಸವ ನಿಮಿತ್ಯ ನಡೆಯುವ ಸಾಮೂಹಿಕ ವಿವಾಹದಲ್ಲಿ ಮಾಡಲು ನಿಶ್ಚಯವಾಗಿತ್ತು. ಲಗ್ನ ಪತ್ರಿಕೆಗಳು ಪ್ರಿಂಟ್ ಆಗಿ ಬಂಧು ಬಳಗಕ್ಕೆ ಕೊಟ್ಟು ಮದುವೆಗೆ ಆಹ್ವಾನಿಸಲಾಗಿತ್ತು.
ಜೊತೆಗೆ ಕರಿಯಪ್ಪನ ಅಣ್ಣನ ಮದುವೆಯು ಇದೇ ಸಂದರ್ಭದಲ್ಲಿ ನಿಶ್ಚಯವಾಗಿದೆ. ಕರಿಯಪ್ಪ ಹಾಗೂ ಅವರ ಅಣ್ಣ ಹಾಗೂ ಮದುವೆಯಾಗುವ ಎರಡೂ ಜೋಡಿ ಪಂಪಾವನದಲ್ಲಿ ನೆನ್ನೆ ರವಿವಾರ ಪ್ರಿವೆಡಿಂಗ್ ಶೂಟಿಂಗ್ ನಡೆಸಿದರು.
ಸಂಜೆವರೆಗೆ ಶೂಟ್ ಮುಗಿಸಿ ಕರಿಯಪ್ಪನ ಅಣ್ಣ ಊರಿಗೆ ಹೋದರೆ ಕರಿಯಪ್ಪ ತನ್ನ ಸಂಗಾತಿ ಆಗಲಿರುವ ಕವಿತಾ ಊರು ಮುಷ್ಟೂರಿಗೆ ಬಿಟ್ಟು ಬರಲು ಬೈಕ್ ನಲ್ಲಿ ಹೊರಟಾಗ ಗಂಗಾವತಿ ತಾಲೂಕು ಚಿಕ್ಕಬೆಣಕಲ್ ಹತ್ತಿರ ರಸ್ತೆಯಲ್ಲಿ ಮೊದಲೇ ಪಂಚರ್ ಆಗಿ ಲಾರಿ ನಿಂತಿತ್ತು. ಆ ಸ್ಥಳದಲ್ಲಿ ಹೊರಟಾಗ ಮಹಾರಾಷ್ಟ್ರದ ನೋಂದಣಿಯ ಲಾರಿ ಬಂದು ಡಿಕ್ಕಿ ಹೊಡೆದಿದೆ.
ಕವಿತಾ ಸ್ಥಳದಲ್ಲಿಯೆ ಪ್ರಾಣ ಬಿಟ್ಟಿದ್ದು ಅರೆಜೀವವಾಗಿದ್ದ ಕರಿಯಪ್ಪನನ್ನ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಪ್ರಾಣ ಹೋಗಿತ್ತು. ಇವರ ಮದುವೆ ಸಂಭ್ರಮದಲ್ಲಿದ್ದ ಕುಟುಂಬಗಳಿಗೆ ಈ ದುರ್ಘಟನೆಯಿಂದ ಸಿಡಿಲು ಬಡಿದಂತಾಗಿದೆ. ಎರಡೂ ಕುಟುಂಬಗಳು ಮತ್ತು ಗ್ರಾಮದಲ್ಲಿ ಶೋಕದ ವಾತಾವರಣ ಉಂಟಾಗಿದೆ.