ಕೊಪ್ಪಳ : ಕೆಲ ತಿಂಗಳಿಂದ ಜಿಲ್ಲೆಯ ಕುಕನೂರು ತಾಲೂಕಿನ ಗಾವರಾಳ ಗ್ರಾಮದಲ್ಲಿ ರಾತ್ರಿ ವೇಳೆ ಸಂಚರಿಸುತ್ತ ಜನರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆಯ ಬಲೆಗೆ ಸಿಲುಕಿದೆ.
ಗ್ರಾಮದ ಹೊರವಲಯದ ಅಣ್ಣಪ್ಪ ಕಂಬಳಿ ಎಂಬುವವರ ತೋಟದ ಮನೆ ಬಳಿ ಪ್ರತಿದಿನ ರಾತ್ರಿಯೆಲ್ಲ ಅಲ್ಲಿಯೆ ಕಾಣಿಸಿಕೊಳ್ಳುತ್ತಿದ್ದ ಈ ಚಿರತೆ ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಿಸಿತ್ತು.
ಇಂದು ಶನಿವಾರ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಅರಿವಳಿಕೆ ಮದ್ದು ನೀಡಿ ಚಿರತೆಯನ್ನು ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ. ಗದಗ ಪ್ರಾಣಿ ಸಂಗ್ರಹಾಲಯದ ಅರಣ್ಯ ಸಿಬ್ಬಂದಿಯೂ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಸೆರೆ ಸಿಕ್ಕಿರುವುದು ಹೆಣ್ಣು ಚಿರತೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಚಿರತೆಯನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಸ್ಥಳಾಂತರ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ.
ಗ್ರಾಮಸ್ಥರು ಕಳೆದ ಕೆಲವು ತಿಂಗಳುಗಳಿಂದ ಚಿರತೆಯ ಆತಂಕದಲ್ಲಿದ್ದರು. ಈಗ ಚಿರತೆ ಸೆರೆ ಸಿಕ್ಕಿದ್ದರಿಂದ ಜನ ನಿಟ್ಟುಸಿರು ಬಿಟ್ಟಿದ್ದಾರೆ.