ಕುಷ್ಟಗಿ : ಕುಷ್ಟಗಿ ತಾಲೂಕು ಕ್ಯಾದಿಗುಪ್ಪಾ ಹತ್ತಿರದ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಂಟೇನರ್ ಲಾರಿಗೆ ಕಾರ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಕಾರ್ ಚಲಾಯಿಸುತ್ತಿದ್ದಾತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಈ ದುರಂತದಲ್ಲಿ ಸಾವನ್ನಪ್ಪಿದವರನ್ನು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿಯ ನಿವಾಸಿ ಹಾಗೂ ಅಡುಗೆ ಅನಿಲ ಅಂಗಡಿ ಮಾಲೀಕ ಪ್ರಶಾಂತ ಪಾಟೀಲ (36) ಎಂದು ಗುರುತಿಸಲಾಗಿದೆ.
ಇಲಕಲ್ನಿಂದ ಕುಷ್ಟಗಿ ಕಡೆಗೆ ವೇಗವಾಗಿ ಬರುತ್ತಿದ್ದ ಕಾರ್, ಕಂಟೇನರ್ ಲಾರಿಗೆ ಹಿಂಬದಿಯಿಂದ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸ ಎಷ್ಟಿತ್ತೆಂದರೆ ಕಾರಿನ ಮುಕ್ಕಾಲು ಭಾಗವೇ ಕಂಟೇನರ್ ಕೆಳಗೆ ನುಗ್ಗಿ ಹೋಗಿದೆ. ಕಂಟೇನರ್ನ ಹಿಂಭಾಗ ಕಾರಿನ ಹಿಂಬದಿ ಸೀಟ್ ವರೆಗೆ ನುಗ್ಗಿರುವ ಭೀಕರ ದೃಶ್ಯ ಕಂಡುಬಂದಿದೆ.
ಕಾರ್ ಡ್ರೈವಿಂಗ್ ಸೀಟ್ನಲ್ಲಿದ್ದ ಪ್ರಶಾಂತ ಪಾಟೀಲ್, ಕಾರು ನುಗ್ಗಿದ ತೀವ್ರತೆಗೆ ಹಿಂಬದಿ ಸೀಟಿನವರೆಗೂ ಸರಿದು ಮಲಗಿದ ಸ್ಥಿತಿಯಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಮತ್ತು ಮೇಲ್ಭಾಗ ಸಂಪೂರ್ಣವಾಗಿ ತುಂಡಾಗಿದ್ದು, ಕಾರಿನ ಭಾಗಗಳು ಹೆದ್ದಾರಿಯ ಮೇಲೆ ದೂರದವರೆಗೆ ಚೆಲ್ಲಾಪಿಲ್ಲಿಯಾಗಿ ಬಿದ್ದವು.
ಈ ಸಂಬಂಧ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.