ಕೊಪ್ಪಳ : ಶಕ್ತಿ ದೇವತೆ ಶ್ರೀ ಹುಲಿಗೆಮ್ಮ ದೇವಸ್ಥಾನದ ಮಹಾರಥೋತ್ಸವ ಮೇ 31 ಶುಕ್ರವಾರ ಸಂಜೆ 5 ಕ್ಕೆ ಜರುಗಲಿದೆ. ಪ್ರತಿ ಮಂಗಳವಾರ, ಶುಕ್ರವಾರ ಸಾವಿರಾರು ಭಕ್ತರು ಭೇಟಿ ನೀಡುವ ಶ್ರೀ ಹುಲಿಗೆಮ್ಮ ದೇವಸ್ಥಾನಕ್ಕೆ ಪ್ರತಿ ಹುಣ್ಣಿಮೆ ದಿನ ಮೂರ್ನಾಲ್ಕು ಲಕ್ಷ ಭಕ್ತರು ಆಗಮಿಸುತ್ತಾರೆ.
ವರ್ಷಕ್ಕೊಮ್ಮೆ ಜರುಗುವ ಜಾತ್ರೆಗೆ ಅಂದಾಜು 8-10 ಲಕ್ಷ ಭಕ್ತರು ಆಗಮಿಸುತ್ತಾರೆ. ಕರ್ನಾಟಕ ಅಲ್ಲದೆ ಆಂಧ್ರ ತೆಲಂಗಾಣ ಮಹಾರಾಷ್ಟ್ರದಿಂದಲೂ ಭಕ್ತರು ಆಗಮಿಸುತ್ತಾರೆ.
ತುಂಗಭದ್ರಾ ನದಿ ದಂಡೆಯಲ್ಲಿರುವ ಸುಮಾರು 800 ವರ್ಷಗಳ ಇತಿಹಾಸದ ಶ್ರೀ ಹುಲಿಗೆಮ್ಮ ದೇವಸ್ಥಾನದ ಗುರುತಾಗಿ ಅಂಚೆ ಇಲಾಖೆ 20 ರೂಪಾಯಿ ಬೆಲೆಯ ವಿಶೇಷ ಲಕೋಟೆ ಬಿಡುಗಡೆ ಮಾಡಿದೆ.
ಕೊಪ್ಪಳ ಅಂಚೆ ವಿಭಾಗದ ಕಚೇರಿ ಉದ್ಘಾಟನೆ ದಿನ ಮಾರ್ಚ್ 1ರಂದು ಅಂದಿನ ಸಂಸದ ಸಂಗಣ್ಣ ಕರಡಿ ಶ್ರೀ ಹುಲಿಗೆಮ್ಮ ದೇವಸ್ಥಾನ ವಿಶೇಷ ಲಕೋಟೆ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಅಂಚೆ ಇಲಾಖೆಯ ಉನ್ನತ ಅಧಿಕಾರಿಗಳೂ ಉಪಸ್ಥಿತರಿದ್ದರು.
ಸುಂದರವಾಗಿ ಮುದ್ರಣಗೊಂಡಿರುವ ಮನಸೆಳೆಯುವ ಲಕೋಟೆ ಮೇಲೆ ಶ್ರೀ ಹುಲಿಗೆಮ್ಮ ದೇವಸ್ಥಾನ, ಗರ್ಭಗುಡಿ , ಕೊಪ್ಪಳ ಜಿಲ್ಲೆಯ ನಕ್ಷೆ ಮುದ್ರಿಸಿದ್ದಾರೆ. ಲಕೋಟೆ ಹಿಂಭಾಗದಲ್ಲಿ ಸಂಕ್ಷಿಪ್ತವಾಗಿ ದೇವಸ್ಥಾನದ ಇತಿಹಾಸ ಮುದ್ರಿಸಲಾಗಿದೆ.